ನಿಪ್ಪಾಣಿ: ದೇಶಪಾಂಡೆ ಫೌಂಡೇಷನ್ ಹುಬ್ಬಳ್ಳಿಯಲ್ಲಿ ಆಯೋಜಿಸಿದ ‘ಲೀಡ್–ತಲಾಶ್ ತಾಂತ್ರಿಕ ಮೇಳ ಕಾರ್ಯಕ್ರಮದಲ್ಲಿ ಸ್ಥಳೀಯ ವಿ.ಎಸ್.ಎಂ. ತಾಂತ್ರಿಕ ಕಾಲೇಜಿನ ಮೆಕಾನಿಕಲ್ ವಿಭಾಗದಲ್ಲಿಯ ಅಂತಿಮ ವರ್ಷದ ವಿದ್ಯಾರ್ಥಿ ಯುವರಾಜ ಪಾಟೀಲ ಸಲ್ಲಿಸಿದ ಅಡಿಕೆ ಬಿಡಿಸುವ ರೋಬೊಟ್–ಯಂತ್ರ ಯೋಜನೆ ₹10 ಲಕ್ಷ ಸೀಡ್ ಮನಿ (ಬೀಜ ಧನ) ಪಡೆಯಲು ಅರ್ಹವಾಗಿದೆ.
ವಿದ್ಯಾರ್ಥಿಗಳ ಅನ್ವೇಷಣಾ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಉದ್ಯಮಿಯಾಗಲು ತಾಂತ್ರಿಕ ಮೇಳ ಆಯೋಜಿಸಲಾಗಿತ್ತು. ರಾಜ್ಯದ ವಿವಿಧೆಡೆಯಿಂದ 241 ವಿದ್ಯಾರ್ಥಿಗಳು ಹೊಸ ಹೊಸ ಚಿಂತನೆಗಳುಳ್ಳ ಯೋಜನೆಗಳು ಸಲ್ಲಿಸಿದ್ದರು. ಅದರಲ್ಲಿ ಸುಮಾರು 18 ಯೋಜನೆಗಳನ್ನು ಅಂತಿಮಗೊಳಿಸಲಾಗಿತ್ತು. ಅಂತಿಮ ಸುತ್ತಿನಲ್ಲಿ ಆಯ್ಕೆಗೊಂಡ ಮೂರು ಯೋಜನೆಗಳಲ್ಲಿ ಯುವರಾಜ ಯೋಜನೆ ಒಂದಾಗಿತ್ತು.
ಪ್ರಶಸ್ತಿ ವಿತರಿಸಿ ಮಾತನಾಡಿದ ಸಂಸ್ಥೆಯ ಚೇರ್ಮನ್ ಚಂದ್ರಕಾಂತ ಅಣ್ಣಾ ಕೋಠಿವಾಲೆ, ‘ಈ ಮೂಲಕ ಯುವರಾಜ ಪಾಟೀಲ ಗಡಿಭಾಗದ ವಿ.ಎಸ್.ಎಂ. ತಾಂತ್ರಿಕ ಕಾಲೇಜಿನ ಕಿರೀಟದಲ್ಲಿ ಮತ್ತೊಂದು ಗರಿ ಸೇರ್ಪಡೆ ಮಾಡಿದ್ದಾನೆ’ ಎಂದರು.
‘ಪ್ರತಿವರ್ಷ ಆಯೋಜಿಸುವ ತಲಾಶ್ ತಾಂತ್ರಿಕ ಮೇಳದಲ್ಲಿ ಮೊದಲ ಮೂವರ ಉತ್ತಮ ಪ್ರೊಜೆಕ್ಟ್ಗಳಿಗೆ ದೇಶಪಾಂಡೆ ಫೌಂಡೇಷನ್ದಿಂದ, ಅವರು ತಾಂತ್ರಿಕ ಪದವಿ ಓದು ಮುಗಿಸಿ ಉದ್ಯೋಗ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬೀಜಧನ ನೆರವು ರೂಪದಲ್ಲಿ ನೀಡಲಾಗುತ್ತದೆ.
ನಮ್ಮ ಕಾಲೇಜಿನ ವಿದ್ಯಾರ್ಥಿಯು ಪ್ರಶಸ್ತಿ ಪಡೆದಿದ್ದು ಹೆಮ್ಮೆ ಎನಿಸುತ್ತಿದೆ’ ಎಂದು ಪ್ರಾಚಾರ್ಯ ಡಾ. ಶರದ ಮಹಾಜನ ಹೇಳಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಬಿ.ಆರ್. ಪಾಟೀಲ, ಉಪಾಧ್ಯಕ್ಷ ಪಪ್ಪು ಅಣ್ಣಾ ಪಾಟೀಲ, ಕಾರ್ಯದರ್ಶಿ ಸದಾಶಿವ ಖಡೇದ, ಪ್ರಾಚಾರ್ಯ ಬಸವರಾಜ ಅನಾಮಿ ಇದ್ದರು.