ದೇವನಹಳ್ಳಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಜಿಟಲ್ ಬೋಧನೆಯೊಂದಿಗೆ ಎಲ್ಲಾ ರೀತಿಯ ಮೂಲ ಸೌಲಭ್ಯ ಹೊಂದಿದ್ದು, ಈಗಾಗಲೇ 2017 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಪ್ರಾಂಶುಪಾಲ ಡಾ.ಬಿ ಚಂದ್ರಶೇಖರ್ ಎಂದು ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು 1984 ರಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಶೇ 90 ರಷ್ಟು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕಾಲೇಜು 26 ಕೊಠಡಿ ವ್ಯವಸ್ಥೆ ಹೊಂದಿದ್ದು, ಪ್ರಯೋಗಾಲಯ, ಬೋಧಕರ ಪ್ರತ್ಯೇಕ ಸಭಾಂಗಣ, ಉಪಹಾರ ಕೇಂದ್ರ, ಪ್ರತಿಯೊಂದು ಸುಸಜ್ಜಿತ ಸ್ಮಾರ್ಟ್ ಕ್ಲಾಸ್ ಕೊಠಡಿ ಸೌಲಭ್ಯ ಹೊಂದಿದೆ ಎಂದು ಮಾಹಿತಿ ನೀಡಿದರು. ಕಳೆದ ವರ್ಷ 1256 ವಿದ್ಯಾರ್ಥಿಗಳು ಬಿಎ, ಬಿಕಾಂ , ಬಿಬಿಎ, ಬಿಎಸ್ಸಿ ಪದವಿಗಳಲ್ಲಿ ಪ್ರವೇಶ ಪಡೆದಿದ್ದರು.
ಈ ಪೈಕಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿ ಎನ್.ಮಾಲಾ ಬೆಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿ ಎರಡು ಚಿನ್ನದ ಪದಕ ಪಡೆದುಕೊಂಡಿದ್ದಾಳೆ. ಕಳೆದ ಸಾಲಿನ ಒಟ್ಟಾರೆ ಫಲಿತಾಂಶ ಶೇ 83.5 ರಷ್ಟು ಆಗಿದ್ದು ಭವಿಷ್ಯದಲ್ಲಿ ಉತ್ತಮ ಗುಣ ಮಟ್ಟದ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ವಿವರಿಸಿದರು.
ವ್ಯಾಸಂಗ ಮಾಡುವ ಪ್ರತಿಯೊಬ್ಬ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಮೊದಲ ಹಂತ ಮತ್ತು ಇತರೆ ಪ್ರವರ್ಗದ ವಿದ್ಯಾರ್ಥಿಗಳಿಗೆ ಎರಡನೆ ಹಂತದಲ್ಲಿ ಲ್ಯಾಪ್ಟಾಪ್ ಅನ್ನು ಪ್ರಸ್ತುತ ಸಾಲಿನಿಂದ ವಿತರಿಸಲು ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ.
ವಿದ್ಯಾರ್ಥಿಗಳು ಕನ್ನಡ ಮತ್ತು ಆಂಗ್ಲ ಭಾಷೆ ವಿಭಾಗದಲ್ಲಿ ಎಚ್ಇಪಿ, ಎಚ್ಇಎಸ್, ಇಪಿಜೆ, ಎಚ್ಇಕೆ, ವಾಣಿಜ್ಯ ವಿಭಾಗದಲ್ಲಿ ಬಿಕಾಂ ಮತ್ತು ಬಿಬಿಎ, ವಿಜ್ಞಾನ ವಿಭಾಗದಲ್ಲಿ ಪಿಸಿಎಂ ಮತ್ತು ಪಿಎಂಸಿಎಸ್ ಜತೆಗೆ ಪತ್ರಿಕೋದ್ಯಮ ವಿಭಾಗದಲ್ಲಿ ಬೋಧನೆ ಸೌಲಭ್ಯ ಇವೆ ಎಂದು ವಿವರಿಸಿದರು.
ಕ್ಯಾಂಪಸ್ ಆಯ್ಕೆ: ಶೈಕ್ಷಣಿಕ ಅರ್ಹತೆ ಅನುಗುಣವಾಗಿ ಸ್ವರ್ಧಾತ್ಮಕ ಪರೀಕ್ಷೆ ಎದುರಿಸಲು ತರಬೇತಿ ನೀಡಿ, ಕ್ಯಾಂಪಸ್ ಆಯ್ಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. 50 ಖಾಸಗಿ ಕಂಪೆನಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದರು .ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಗೆ ಒಟ್ಟು ಐವತ್ತು ಸಮಿತಿ ರಚಿಸಲಾಗಿದ್ದು (ಹೆಚ್ಚಿನ ಮಾಹಿತಿಗೆ ಕಾಲೇಜಿನ ಕಚೇರಿ ದೂ:ಸಂ 080–27607212 (ಪ್ರವೇಶ ವಿವರಕ್ಕೆ gfgcdhalli1984@gmail.com ಗೆ ಲಾಗ್ ಇನ್ ಆಗಿ)
ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು
ಪ್ರತಿಯೊಂದು ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ, ವಿದ್ಯಾರ್ಥಿಗಳಿಗೆ ಒಂದೇ ತೆರನಾದ ಸಮವಸ್ತ್ರ. ಇವು ಈ ಸಾಲಿನಿಂದ ಕಾಲೇಜಿನಲ್ಲಿ ಆರಂಭವಾಗಲಿವೆ. ಗ್ರಂಥಾಲಯದಲ್ಲಿ ಕನ್ನಡ ಆಂಗ್ಲ ಭಾಷಾ ಐಚ್ಛಿಕ ಪಠ್ಯಗಳಿಗೆ ಸಂಬಂಧಿಸಿದ ಹಾಗೂ ಸಾಹಿತ್ಯಕ ಕೃತಿಕಾರರ ಕಥೆ ಕಾದಂಬರಿ ಒಟ್ಟು 32 ಸಾವಿರ ಪುಸ್ತಕಗಳಿವೆ. ಅಂಧ ವಿದ್ಯಾರ್ಥಿಗಳಿಗಾಗಿ ಬ್ರೈಲ್ ಲಿಪಿಯ ಪುಸ್ತಕಗಳಿಗೆ ಕೊರತೆ ಇಲ್ಲ ಎಂದರು.ಆಸಕ್ತ ವಿದ್ಯಾರ್ಥಿಗಳಿಗೆ ಎನ್.ಸಿ.ಸಿ. ಎನ್ನೆಸ್ಸೆಸ್ ವ್ಯವಸ್ಥೆ ಇವೆ.
* *
ಕಾಲೇಜಿನಲ್ಲಿ ಸ್ನಾತಕೊತ್ತರ ಪದವಿ ತರಗತಿ ಆರಂಭಿಸಲು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ನಿರ್ಣಯವನ್ನು ಕುಲಪತಿಗೆ ಕಳುಹಿಸಲಾಗಿದೆ.
ಡಾ.ಬಿ ಚಂದ್ರಶೇಖರ್
ಪ್ರಾಂಶುಪಾಲ
* *
ಶೈಕ್ಷಣಿಕ ಅನುದಾನದ ಜತೆಗೆ ಶಾಸಕರ ಅನುದಾನದಲ್ಲಿ ಒಂದು ಸಭಾಂಗಣ ನಿರ್ಮಾಣ ಮಾಡಿ, ಎರಡು ಕೊಳವೆ ಬಾವಿ ಕೊರೆಯಿಸಲಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಕಾಲೇಜಿಗೆ ದಾಖಲಿಸಬೇಕು.
ಪಿಳ್ಳಮುನಿಶಾಮಪ್ಪ, ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.