ಮಾಗಡಿ: ತಾಲ್ಲೂಕಿನ ರೈತರು ಹೊಲಗದ್ದೆಗಳಲ್ಲಿ ಸಸಿಗಳನ್ನು ನೆಡಬೇಕು. ಭೂಮಿಯನ್ನು ಪಾಳು ಬಿಡದೆ ಎಲ್ಲೆಡೆ ಅರಣ್ಯ ಕೃಷಿ ಮಾಡಬೇಕು ಎಂದು ಚಂದೂರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದ (ಕೆವಿಕೆ) ಸಂಯೋಜಕ ಡಾ.ನಾಗರಾಜು ಕೆಂಕೆರೆ ತಿಳಿಸಿದರು.
ಕೆವಿಕೆಯಲ್ಲಿ ಬೆಳೆಸಿರುವ ವಿವಿಧ ಬಗೆಯ ದೇಶೀಯ ಸಸಿಗಳನ್ನು ರೈತರಿಗೆ ಪರಿಚಯಿಸಿ ಅವರು ಮಾತನಾಡಿದರು. ಕೇಂದ್ರದಲ್ಲಿ ನೂರಾರು ಗಂಧದ ಸಸಿ, ತೇಗ, ಹಲಸು, ಜಂಬುನೇರಳೆ, ಪಪ್ಪಾಯ, ನೆಲ್ಲಿ, ಮಾವು, ಹತ್ತಿ, ಮತ್ತಿ, ಬೇವು, ಬೇಲ, ನುಗ್ಗೆ, ಬೆಟ್ಟದ ನೆಲ್ಲಿ, ಲಾವಂಚ ಬೇರು ಇನ್ನಿತರ ಸಸಿ ಬೆಳೆಸಲಾಗಿದೆ ಎಂದರು.
ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆಗೆ ಅರಣ್ಯ ಕೃಷಿ ರೂಢಿ ಮಾಡಿದರೆ ಲಾಭ ಸಿಗಲಿದೆ ಎಂದು ಅವರು ತಿಳಿಸಿದರು. ‘ಹಚ್ಚಹಸಿರಿನಿಂದ ಕೂಡಿರುವ ಕೆವಿಕೆ ಫಾರಂನಲ್ಲಿ ನೂರಾರು ಪಕ್ಷಿಗಳ ಕಲರವ ಕೇಳುವುದು ಸಂತಸದಾಯಕವಾಗಿದೆ.
ಒಂದಿಂಚು ಭೂಮಿಯನ್ನೂ ಪಾಳು ಬಿಡದೆ ನೀರಿನ ಹೊಂಡ, ಸಸಿಗಳನ್ನು ಬೆಳೆಸಿರುವುದನ್ನು ನೋಡಿದಾಗ ನಾವು ನಮ್ಮ ಭೂಮಿಯನ್ನು ವ್ಯರ್ಥ ಮಾಡಿಕೊಂಡಿದ್ದೇವೆ ಎಂಬ ವ್ಯಥೆಯಾಗುತ್ತಿದೆ’ ಎಂದು ರೈತ ತಿಮ್ಮೇಗೌಡ, ಹನುಮಯ್ಯ ತಿಳಿಸಿದರು, ಕಲ್ಯ, ಚಂದೂರಾಯನ ಹಳ್ಳಿ, ಹನುಮಾಪುರ ಸುತ್ತಲಿನ ರೈತರು ಭಾಗವಹಿಸಿದ್ದರು.