ಸಾತನೂರು (ಕನಕಪುರ): ಹಿಂಡಿನಿಂದ ಬೇರ್ಪಟ್ಟಿರುವ ಒಂಟಿ ಸಲಗ ಕಾಡಾನೆಯು ಜಮೀನುಗಳಿಗೆ ನುಗ್ಗಿ ಮಾವು ತೆಂಗು ಹಲಸು ತೇಗದ ಮರಗಳನ್ನು ನಾಶಗೊಳಿಸಿ ಅಪಾರ ನಷ್ಟ ಉಂಟು ಮಾಡಿರುವ ಘಟನೆ ತಾಲ್ಲೂಕಿನ ಸಾತನೂರು ಹೋಬಳಿ ಕಬ್ಬಾಳು ಗ್ರಾಮ ಪಂಚಾಯಿತಿಯ ಕುರುಬಳ್ಳಿದೊಡ್ಡಿ ಬಳಿ ನಡೆದಿದೆ.
ಕುರುಬಳ್ಳಿದೊಡ್ಡಿ ಗ್ರಾಮದ ರೈತರಾದ ರಮೇಶ್, ಪಾಪಣ್ಣ, ರಾಜೇಶ್ ಇವರ ಜಮೀನುಗಳಲ್ಲಿ ದಾಳಿ ನಡೆಸಿರುವ ಕಾಡಾನೆ ಅನೇಕ ಮರಗಳನ್ನು ಬುಡಸಮೇತ ಕಿತ್ತು ನಾಶಗೊಳಿಸಿದೆ. ಹಲವು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಮರಗಳು ನಾಶವಾಗುವುದರಿಂದ ರೈತರು ಕಂಗಲಾಗಿದ್ದಾರೆ.
ಒಂಟಿ ಆನೆಯು ತುಂಬಾ ಅಪಾಯಕಾರಿಯಾಗಿದ್ದು ಮನುಷ್ಯರ ಮೇಲೆಯು ದಾಳಿ ಮಾಡುವುದರಿಂದ ಅದನ್ನು ಓಡಿಸಲು ಕಷ್ವವಾಗುತ್ತಿದೆ. ಅದಕ್ಕೆ ಎಲ್ಲಿ ಮೇವು ಸಿಗುತ್ತೋ ಅಲ್ಲಿ ಹುಡುಕಿಕೊಂಡು ಹೋಗಿ ಬೆಳೆ ನಷ್ಟ ಮಾಡುತ್ತಿದೆ. ಅರಣ್ಯ ಇಲಾಖೆಯವರು ಕೂಡಲೆ ಆನೆಯನ್ನು ಸೆರೆಹಿಡಿದು ಬೇರೆ ಕಡೆ ಸ್ಥಳಾಂತರಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.