ಬೆಂಗಳೂರು: ಸಾರಾ ಸಂಸ್ಥೆ, ಕೆ.ವಿ.ಸುಬ್ಬಣ್ಣ ರಂಗ ಸಮೂಹ, ನಾಡಚಾವಡಿ ಸಹಯೋಗದೊಂದಿಗೆ ಪರಿಸರದ ಉಳಿವಿಗಾಗಿ 2017ರ ಜೂನ್ 5ರಿಂದ 10ರವರೆಗೆ ಜೋಗದಿಂದ ಶಿವಮೊಗ್ಗ ದವರೆಗೆ ‘ಘಟ್ಟದತ್ತ ದಿಟ್ಟ ಹೆಜ್ಜೆ’ ಎಂಬ 157 ಕಿ.ಮೀ. ಉದ್ಯದ ವಿಶಿಷ್ಟ ಜಾಗೃತಿ ನಡಿಗೆ ಆಯೋಜಿಸಲಾಗಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಪರಿಸರವಾದಿ ಅಖಿಲೇಶ್ ಚಿಪ್ಪಳಿ ಅವರು ಮಾತನಾಡಿ, ‘ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಎಂಬ ಘೋಷ ವಾಕ್ಯದೊಂದಿಗೆ ಜೂನ್ 5ರಂದು ಬೆಳಿಗ್ಗೆ 8ಕ್ಕೆ ಜೋಗದಿಂದ ಪ್ರಾರಂಭವಾಗುವ ಈ ನಡಿಗೆಯಲ್ಲಿ ನಾಡಿನ ಪರಿಸರ ಚಿಂತಕರು ಹಾಗೂ ಪರಿಸರ ಆಸಕ್ತರು ಭಾಗವಹಿಸಲಿದ್ದಾರೆ’ ಎಂದರು.
‘ಸಿರಿವಂತೆ, ಆಲಗೇರಿ ಮಂಡ್ರಿ, ಕೋಡೂರು, ಆನಂದಪುರಂ, ಆಯನೂರು ಮಾರ್ಗವಾಗಿ ಜೂನ್ 10 ರಂದು ಶಿವಮೊಗ್ಗ ತಲುಪಲಿದೆ’ ಎಂದು ತಿಳಿಸಿದರು.
‘ಮಾರ್ಗ ಮಧ್ಯದಲ್ಲಿ ಪರಿಸರ ಜಾಗೃತಿ, ಕಾರ್ಯಾನುಷ್ಠಾನದ ಕುರಿತ ಚಿಂತನೆ, ಕಿರುಚಿತ್ರ ಪ್ರದರ್ಶನ, ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಮಾತುಕತೆ, ಚರ್ಚೆ ನಡೆಯಲಿದೆ’ ಎಂದು ಹೇಳಿದರು.