ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ. ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಬುಧವಾರ ತಾಲ್ಲೂಕು ಕಚೇರಿಯಲ್ಲಿ ನಡೆದ ಬಗರ್ ಹಕುಂ ಸಾಗುವಳಿ ಸಮಿತಿ ಸಭೆಯಲ್ಲಿ ನಂದಿ ಹೋಬಳಿಯ 1,965 ಅರ್ಜಿಗಳನ್ನು ಇತ್ಯರ್ಥಗೊಳಿಸಲಾಯಿತು. ಈ ಪೈಕಿ 18 ಫಲಾನುಭವಿಗಳಿಗೆ ಸುಮಾರು 32 ಎಕರೆ ಜಮೀನನ್ನು ಮಂಜೂರು ಮಾಡಲಾಯಿತು.
ಜಮೀನು ಸ್ವಾಧೀನಾನುಭವದಲ್ಲಿ ಇಲ್ಲದ ಹಾಗೂ ಸರ್ಕಾರಿ ಜಮೀನು ಲಭ್ಯವಿಲ್ಲದ ಕಾರಣ ಈ ಪೈಕಿ 1,947 ಅರ್ಜಿಗಳನ್ನು ವಿಲೇ ಇಡಲಾಯಿತು.
ಸಭೆಯಲ್ಲಿ ಮಾತನಾಡಿದ ಸುಧಾಕರ್, ‘ಸರ್ವೆ ಸಿಬ್ಬಂದಿ ಕಂದಾಯ ಇಲಾಖೆಯ ಸಿಬ್ಬಂದಿಯೊಂದಿಗೆ ಸಹಕರಿಸಿ ಕೂಡಲೇ ಬಗರ್ ಹುಕುಂ ಸಾಗುವಳಿದಾರರಿಗೆ ಸಂಬಂಧಿಸಿದಂತೆ ಹೋಬಳಿವಾರು ಸರ್ವೆ ಕಾರ್ಯ ಪೂರ್ಣ ಗೊಳಿಸಬೇಕು’ ಎಂದು ಸಭೆಯಲ್ಲಿದ್ದ ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
‘ಈಗಾಗಲೇ ಸರ್ವೆ ಕಾರ್ಯಕ್ಕಾಗಿ 8 ಭೂಮಾಪಕರನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಅವರ ಸಹಕಾರ ಪಡೆದುಕೊಳ್ಳಬೇಕು. ವಿಳಂಬ ಮಾಡದೆ ಸೆಪ್ಟೆಂಬರ್ ಅಂತ್ಯದೊಳಗೆ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಇತ್ಯರ್ಥಗೊಳಿಸಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡಲು ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಮಿತಿ ಸದಸ್ಯರಾದ ಸುಬ್ಬರಾಯಪ್ಪ, ನಂದಿ ಮುನಿಸ್ವಾಮಿ, ನಾರಾಯಣಮ್ಮ ತಹಶೀಲ್ದಾರ್ ನರಸಿಂಹಮೂರ್ತಿ ಸಭೆಯಲ್ಲಿ ಹಾಜರಿದ್ದರು.