ತುಮಕೂರು: ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಹಿಂದಿ ಬೋಧಿಸಲು ಎರಡು ಶಾಲೆಗಳಿಗೆ ಒಬ್ಬ ಹಿಂದಿ ಶಿಕ್ಷಕ ನೇಮಕದ ಬಗ್ಗೆ ಚಿಂತಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಸಲಹೆ ನೀಡಿದರು.
ನಗರದ ಜಿಲ್ಲಾ ಬಾಲಭವನ ಸಭಾಂಗಣದಲ್ಲಿ ಬುಧವಾರ ನಡೆದ ಸರ್ಕಾರಿ ಶಾಲೆಗಳ ಬಲಪಡಿಸುವಿಕೆ ಕಾರ್ಯಕ್ರಮ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಹಿಂದಿ, ಇಂಗ್ಲಿಷ್ ಶಿಕ್ಷಕರ ಕೊರತೆ ಹೆಚ್ಚಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಳ್ವ ‘ಎರಡು ಶಾಲೆಗೆ ಒಬ್ಬ ಶಿಕ್ಷಕ ನೇಮಕ ಮಾಡುವ ಬಗ್ಗೆ ಚಿಂತಿಸಿ’ ಎಂದು ಹೇಳಿದರು.
ಶೌಚಾಲಯ, ಕೊಠಡಿ, ಪಠ್ಯಪುಸ್ತಕ, ಶಿಕ್ಷಕರ ಕೊರತೆ ಸೇರಿ ಮೂಲಭೂತ ಸೌಕರ್ಯಗಳ ಸಮಸ್ಯೆ ನೀಗಿಸಿಕೊಳ್ಳಲು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಹಾಯ ಪಡೆಯುವಂತೆ ಹೇಳಿದರು.
‘ಶಿಕ್ಷಕರು ನೀಡಿರುವ ಸಲಹೆ ಮತ್ತು ಬೇಡಿಕೆಗಳನ್ನು ಪರಿಶೀಲಿಸಲಾಗುವುದು. ಶಾಲೆಗಳನ್ನು ಬಲಪಡಿಸಲು ನಿಮ್ಮ ಸಹಕಾರವೂ ಅಗತ್ಯವಿದೆ’ ಎಂದರು.
‘ನಲಿ–ಕಲಿ, ಬಿಸಿಯೂಟ ಸೇರಿ ಇತರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಶಿಕ್ಷಕರು ಬೇರೆಯದೆ ಕರ್ತವ್ಯ ನಿರ್ವಹಿಸಿದಂತೆ ಆಗುತ್ತಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಹಾಗೂ ಏಕಲವ್ಯ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ವಸತಿ ಶಾಲೆಗಳಿಗೆ ವಿದ್ಯಾರ್ಥಿಗಳು ಸೇರುತ್ತಿರುವುದರಿಂದ ಸರ್ಕಾರಿ ಶಾಲೆಗಳಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಹಲವು ಶಿಕ್ಷಕರು ಅಭಿಪ್ರಾಯಪಟ್ಟರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿ. ಅನಿತಾ, ಆಯೋಗದ ಸದಸ್ಯೆ ಅರ್ಪಣಾಕೊಳ್ಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಂಜೇಗೌಡ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ರಾಜೇಂದ್ರ ಇದ್ದರು.