ಧರ್ಮಪುರ: ಖಾಸಗಿ ಶಾಲೆಗಳಲ್ಲಿ ಮಾತ್ರ ಆಂಗ್ಲ ಮಾಧ್ಯಮ ಬೋಧನೆ ಮೂಲಕ ಪೂರ್ವ ಪ್ರಾಥಮಿಕ (ಎಲ್ಕೆಜಿ ಮತ್ತು ಯುಕೆಜಿ) ಶೈಕ್ಷಣಿಕ ವ್ಯವಸ್ಥೆ ಸಿಗುವುದು ಎಂಬ ನಾಗರಿಕರ ಮನೋ ಭಾವನೆ ಹೋಗಲಾಡಿಸಲು ಸರ್ಕಾರಿ ಶಾಲೆಗಳಲ್ಲೂ ಈಗ ಅಂತಹ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತರಾಯಪ್ಪ ತಿಳಿಸಿದರು.
ಸಮೀಪದ ಚಿಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಸಮಗ್ರ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ಆರಂಭೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಚಿತ್ರದುರ್ಗ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಚಿಲ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಆರಂಭಿಸಲಾಗುತ್ತಿದೆ. ಗುಣಾತ್ಮಕ ಹಾಗೂ ನೈಜ ಶಿಕ್ಷಣಕ್ಕಾಗಿ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸ ಬೇಕು’ ಎಂದ ಮನವಿ ಮಾಡಿದರು.
ಸ್ವಾಮಿ ವಿವೇಕಾನಂದ ಟ್ರಸ್ಟ್ನ ನಿರ್ದೇಶಕ ಹಾಗೂ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಹೆಚ್ಚಿನ ಶುಲ್ಕವನ್ನು ನೀಡಿ ಖಾಸಗಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗೆ ಪ್ರವೇಶ ಪಡೆಯಲು ಆರ್ಥಿಕವಾಗಿ ತೊಂದರೆಯಾಗುತ್ತದೆ. ಇದನ್ನು ತಪ್ಪಿಸಲು ನಾವು ಸರ್ಕಾರಿ ಶಾಲೆಯಲ್ಲೇ ಪ್ರಾರಂಭಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕಿಯೋನಿಕ್ಸ್ ಸಹಕಾರ ದೊಂದಿಗೆ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುವುದು’ ಎಂದರು.
ಎಸ್ಡಿಎಂಸಿ ಅಧ್ಯಕ್ಷ ರವಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಪಿ.ಎಲ್.ಶಿವಣ್ಣ, ಗ್ರಾಮ ಪಂಚಾಯ್ತಿ ಸದಸ್ಯರಾದ ಚಿದಾನಂದಮೂರ್ತಿ, ನರೇಂದ್ರ, ಜಗದಾಂಬ, ಮಹಾರುದ್ರಪ್ಪ, ವಕೀಲ ಭೂತೇಶ್, ಸಿಆರ್ಪಿ ಲೋಕಮ್ಮ, ಮುಖ್ಯ ಶಿಕ್ಷಕ ಚಿದಾನಂದ ಭಾರ್ತಿ, ಶಿಕ್ಷಕರಾದ ಈರೇಗೌಡ, ಮಂಜುಳಾ, ಭಾರತಿ, ಸತೀಶ್, ಲಾವಣ್ಯ, ರಾಜೇಶ್ವರಿ ಮತ್ತು ಸ್ವಾಮಿ ವಿವೇಕಾನಂದ ಟ್ರಸ್ಟ್ನ ಸದಸ್ಯರು ಉಪಸ್ಥಿತರಿದ್ದರು.