ನವದೆಹಲಿ: ಉತ್ತರ ಪ್ರದೇಶದ ಜೆವಾರ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಬರುತ್ತಿದ್ದ ಕುಟುಂಬವೊಂದನ್ನು ತಡೆದು ನಿಲ್ಲಿಸಿದ ದುಷ್ಕರ್ಮಿಗಳು ಒಬ್ಬನನ್ನು ಹತ್ಯೆ ಮಾಡಿ, ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಗುರುವಾರ ನಡೆದಿದೆ.
ಗ್ರೇಟರ್ ನೋಯ್ಡಾದಲ್ಲಿರುವ ಜೆವಾರ್ ಎಂಬಲ್ಲಿಂದ ಬುಲಂದ್ಶಹರ್ಗೆ ಕುಟುಂಬವೊಂದು ಕಾರಿನಲ್ಲಿ ಪ್ರಯಾಣ ಬೆಳೆಸಿತ್ತು. ಆ ಕಾರಿನಲ್ಲಿ ನಾಲ್ವರು ಗಂಡಸರು ಮತ್ತು ನಾಲ್ವರು ಹೆಂಗಸರಿದ್ದರು. ರಾತ್ರಿ 1 ಗಂಟೆಯ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣಿಸುತ್ತಿದ್ದಾಗ ಯಾವುದೋ ವಸ್ತು ಕಾರಿಗೆ ಅಡ್ಡಬಂದಾಗ ಕಾರನ್ನು ನಿಲ್ಲಿಸಿ ಕಾರಿನಲ್ಲಿದ್ದ ಗಂಡಸರು ಹೊರಗಿಳಿದಿದ್ದಾರೆ.
ಆ ಹೊತ್ತಲ್ಲಿ ಆಯುಧಗಳೊಂದಿಗೆ ಬಂದ ಆರು ಮಂದಿ ದುಷ್ಕರ್ಮಿಗಳು ಕಾರನ್ನು ಸುತ್ತುವರಿದು ಕಾರಿನೊಳಗಿದ್ದ ನಾಲ್ವರು ಮಹಿಳೆಯರನ್ನು ಹೊರಗೆಳೆದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆ ಕುಟುಂಬದವರ ಕೈಯಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ. ಮಹಿಳೆಯರನ್ನು ರಕ್ಷಿಸಲು ಹೋದ 45ರ ಹರೆಯದ ವ್ಯಕ್ತಿಯನ್ನು ಈ ದುಷ್ಕರ್ಮಿಗಳ ಗುಂಪು ಗುಂಡಿಕ್ಕಿ ಹತ್ಯೆ ಮಾಡಿದೆ.
ಕಾರು ನಡುರಸ್ತೆಯಲ್ಲಿ ನಿಂತು ಕಾರಿನಿಂದ ಹೊರಗಳಿಯುವ ಮುನ್ನ ಇಲ್ಲಿ ಏನೋ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ಫೋನ್ ಮಾಡಿದ್ದೆವು. ಆದರೆ ಪೊಲೀಸರು ತುಂಬಾ ತಡವಾಗಿ ಬಂದರು ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ದುಷ್ಕರ್ಮಿಗಳು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ. ಆದರೆ ಅತ್ಯಾಚಾರ ನಡೆದಿದೆಯೇ ಎಂಬುದರ ಬಗ್ಗೆ ವೈದ್ಯಕೀಯ ಪರೀಕ್ಷೆಯ ನಂತರವೇ ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರಿನಲ್ಲಿದ್ದ ಕುಟುಂಬದ ಸದಸ್ಯರ ಆಭರಣಗಳನ್ನು ಮತ್ತು ₹44,000 ನಗದನ್ನು ದುಷ್ಕರ್ಮಿಗಳು ದೋಚಿದ್ದಾರೆ ಎಂದು ಕುಟುಂಬ ದೂರಿದೆ.