ಬಿಗ್ ಬಾಸ್ –4 ರಿಯಾಲಿಟಿ ಶೋದಲ್ಲಿ ಸಂಜನಾ- ಭುವನ್– ಪ್ರಥಮ್ ತ್ರಿಕೋನ ಪ್ರೇಮಕತೆಯ ಗಾಳಿಸುದ್ದಿ ಸಾಕಷ್ಟು ಪ್ರಚಾರ ಪಡೆದುಕೊಂಡಿತ್ತು. ಇದೀಗ ಆ ಗಾಳಿಸುದ್ದಿಗೆ ರೆಕ್ಕೆಪುಕ್ಕ ನೀಡಿ ಸರಣಿಯ ರೂಪ ನೀಡಿ ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಲು ಮುಂದಾಗಿದೆ. ಸರಣಿಯಲ್ಲಿ ನಟಿಸುತ್ತಿರುವವರೂ ಈ ಮೂವರೇ.
ಇದೇ ಶನಿವಾರ ಶುರುವಾಗಲಿರುವ ‘ಸಂಜು ಮತ್ತು ನಾನು’ ಎಂಬ 24 ಕಂತುಗಳ ಶೋ ಕುರಿತ ಪೀಠಿಕೆ ಇದು. ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಶೋ ಪ್ರಸಾರವಾಗಲಿದೆ.
ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆದುಕೊಳ್ಳುತ್ತಿದೆ.
ಬಿಗ್ಬಾಸ್ ಮನೆಯಲ್ಲಿ ತೀರಾ ಖಾಸಗಿಯಾಗಿ ಸಮಯ ಕಳೆಯುತ್ತಾ, ಜೋಡಿಯಾಗಿಯೇ ಕಾಣಿಸಿಕೊಂಡಿದ್ದ ಸಂಜನಾ ಹಾಗೂ ಭುವನ್ ಅವರ ನಡುವಿನ ಸಂಬಂಧದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆದಿತ್ತು. ಅಷ್ಟರಲ್ಲಿ ‘ಒಳ್ಳೆ ಹುಡುಗ’ ಪ್ರಥಮ್ ತನ್ನ ವಿಚಿತ್ರ ಮ್ಯಾನರಿಸಂನಿಂದ ಸಂಜನಾಗೆ ಲವ್ ಮಾಡುವಂತೆ ದುಂಬಾಲು ಬಿದ್ದಿದ್ದರು. ಹಾಗಾಗಿ ‘ಸಂಜು ಮತ್ತು ನಾನು’ ಈ ತ್ರಿಕೋನ ಪ್ರೇಮದ ಮುಂದುವರಿದ ಭಾಗವೇ ಎಂಬುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.
‘ಇದರಲ್ಲಿ ಈ ಮೂವರೂ ಇರುವುದರಿಂದ ಇದು ಬಿಗ್ಬಾಸ್ ಮನೆಯ ಮುಂದು ವರಿದ ಕತೆಯಂತೆ ಅನಿಸಬಹುದು. ಆದರೆ ಇದು ಅಲ್ಲಿನ ಘಟನೆಗಳಿಂದ ಪ್ರೇರಿತವಾಗಿ ಹೆಣೆದಿರುವ ಕಾಲ್ಪನಿಕ ಕತೆ. ‘ಬಿಗ್ಬಾಸ್’ ನಡೆಯುತ್ತಿದ್ದಾಗಲೇ ಈ ಕತೆ ಹೊಳೆದಿತ್ತು. ವೀಕ್ಷಕರಿಗೆ ವಾರಾಂತ್ಯದಲ್ಲಿ ಮನಸ್ಸಿಗೆ ಖುಷಿ ನೀಡುವ ಹಾಸ್ಯ ಧಾಟಿಯ ಕಾರ್ಯಕ್ರಮವಿದು’ ಎನ್ನುತ್ತಾರೆ ಕಲರ್ಸ್ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್.
‘ಬಿಗ್ಬಾಸ್ನಿಂದ ಹೊರಗೆ ಬಂದ ಬಳಿಕ ನಡೆದಿರಬಹುದು ಎಂಬಂತಹ ಕೆಲ ಘಟನೆಗಳನ್ನು ಇಲ್ಲಿ ತೋರಿಸಲಾಗಿದೆ. ಹೊರಗಡೆ ಸಂಜನಾ ಸಿಕ್ಕಾಗ ನಾನು ಮತ್ತು ಭುವನ್ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಕಲ್ಪಿಸಿಕೊಂಡು ಕಥೆಯನ್ನು ಬೆಳೆಸಲಾಗಿದೆ’ ಎಂದು ಪ್ರಥಮ್ ಕತೆಯ ಸುಳಿವು ನೀಡುತ್ತಾರೆ.
‘ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಕತೆ. ಈ ಸರಣಿಯ ಪೂರ್ಣ ಕತೆಯನ್ನು ನಾನು ಕೇಳಿಲ್ಲ. ಇದರಲ್ಲಿ ನಾಯಕ–ಖಳನಾಯಕ ಎಂಬ ಪರಿಕಲ್ಪನೆ ಇಲ್ಲ. ಆದರೆ ನಾಯಕಿ ಇರ್ತಾಳೆ ಎಂಬುದು ಸ್ಪಷ್ಟ. ಬಿಗ್ಬಾಸ್ನಲ್ಲಿ ನಾನು ಮತ್ತು ಸಂಜನಾ ದಿನದ 24 ಗಂಟೆಯೂ ಜೊತೆಗಿರುತ್ತಿದ್ದೆವು. ಆದರೆ ಅಲ್ಲಿಂದ ಹೊರಬಂದ ಮೇಲೆ ನಮ್ಮ ಬದುಕೇ ಬೇರೆ. ಅದಕ್ಕೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಅದು ರಿಯಾಲಿಟಿ ಶೋ. ಇದು ಟಿ.ವಿ ಸರಣಿ. ವಾರದಿಂದ ವಾರಕ್ಕೆ ಕತೆಗೆ ಒಂದಷ್ಟು ತಿರುವುಗಳಿರುತ್ತವೆ’ ಎಂಬ ವಿವರಣೆ ಭುವನ್ ಅವರದು.
‘ಜನರಿಗೆ ಮನರಂಜನೆ ನೀಡುವುದಷ್ಟೇ ಈ ಕಾರ್ಯಕ್ರಮದ ಉದ್ದೇಶ’ ಎಂದು ಪ್ರಥಮ್ ಕೂಡ ಒತ್ತಿ ಹೇಳುತ್ತಾರೆ.
‘ನಾನು ಮತ್ತು ಭುವನ್ ಒಳ್ಳೆಯ ಸ್ನೇಹಿತರು. ಪ್ರಥಮ್ ಬಿಗ್ಬಾಸ್ನಲ್ಲಿ ಇದ್ದ ಹಾಗೆಯೇ ಈಗಲೂ ಇದ್ದಾನೆ. ಏನೂ ಬದಲಾಗಿಲ್ಲ. ಶೂಟಿಂಗ್ನಲ್ಲಿ ಅವನಿಗೆ ನೀಡಿರುವ ಡೈಲಾಗ್ಗೆ ತನ್ನದೊಂದಿಷ್ಟು ಸೇರಿಸಿಕೊಳ್ಳುತ್ತಾನೆ. ಎಲ್ಲರನ್ನೂ ಗೋಳು ಹುಯ್ದುಕೊಳ್ಳುತ್ತಾನೆ. ಕತೆಯೂ ಅದೇ ರೀತಿಯಿದೆ’ ಎಂದು ಸಂಜನಾ ವಿವರಿಸುತ್ತಾರೆ.
ಈ ವಿಭಿನ್ನ ಪ್ರಯೋಗದ ಚಿತ್ರೀಕರಣವನ್ನು ಸದ್ಯಕ್ಕೆ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ. ಮುಂದೆ ಕಥೆ ಬದಲಾದಂತೆ ಕೊಡಗಿನಲ್ಲೂ ಚಿತ್ರೀಕರಣ ನಡೆಸಲಾಗುವುದು.
‘ಇಂತಹ ಟಿ.ವಿ ಸರಣಿ ಕನ್ನಡದ ವಾಹಿನಿಗಳ ಮಟ್ಟಿಗೆ ಹೊಸ ಪ್ರಯೋಗ. ಎಲ್ಲಾ ಟಿವಿ ವಾಹಿನಿಗಳು ವಾರಾಂತ್ಯದಲ್ಲಿ ರಿಯಾಲಿಟಿ ಶೋ, ನೃತ್ಯ ಕಾರ್ಯಕ್ರಮ, ಗೇಮ್ ಶೋ ಪ್ರಸಾರ ಮಾಡುತ್ತವೆ. ನಾವೂ ಟಿ.ವಿ ಸರಣಿಯಂಥ ಹೊಸ ರೀತಿಯ ಕಾರ್ಯಕ್ರಮ ಯಾಕೆ ಪ್ರಸಾರ ಮಾಡಬಾರದು ಎಂದು ಈ ಪ್ರಯೋಗ ನಡೆಸುತ್ತಿದ್ದೇವೆ’ ಎಂದು ಪರಮೇಶ್ವರ್ ತಿಳಿಸುತ್ತಾರೆ.
ಈ ಸರಣಿ ಮುಗಿದ ಬಳಿಕ ಭುವನ್, ಸುನಿಲಾಚಾರ್ಯ ನಿರ್ದೇಶನದ ‘ರಾಂಧವ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲಿದ್ದಾರೆ. ಸಂಜನಾ ಮಹತ್ವದ ಪಾತ್ರ ಸಿಕ್ಕರೆ ಮಾತ್ರ ನಟನೆಯಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ್ದಾರೆ.
ಈ ಸರಣಿ ವೀಕ್ಷಿಸಲು ಬಿಗ್ಬಾಸ್ ಸೀಸನ್ ನಾಲ್ಕರ ಸ್ಪರ್ಧಿಗಳೂ ಉತ್ಸುಕರಾಗಿದ್ದಾರೆ.
‘ಬಿಗ್ಬಾಸ್ ಶೋ ನೋಡಲು ಸಂಜನಾ, ಭುವನ್ ಇದ್ದಾರೆ ಎಂಬುದು ಎರಡು ಕಾರಣವಾಗಿತ್ತು. ಬಿಗ್ಬಾಸ್ನಲ್ಲಿ ಸ್ಕ್ರಿಪ್ಟ್ ಇರಲಿಲ್ಲ. ಈ ಶೋದಲ್ಲಿ ಸ್ಕ್ರಿಪ್ಟ್ ಇರುತ್ತೆ. ಭುವನ್– ಸಂಜನಾ ಜೋಡಿಯಾಗಿದ್ದರೆ, ಪ್ರಥಮ್ ‘ಪ್ರೀತ್ಸೆ ಉಪೇಂದ್ರ’ ಆಗಿರ್ತಾರೆ ಎಂದು ನನ್ನ ಅಭಿಪ್ರಾಯ’ ಎಂದು ಕಿರಿಕ್ ಕೀರ್ತಿ ನಗುತ್ತಾರೆ.
‘ಈ ಮೂವರು ಬಿಗ್ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ಇವರನ್ನು ಆಯ್ಕೆ ಮಾಡಿಕೊಂಡಿರಬಹುದು. ಕತೆ ಏನು ಎಂಬುದನ್ನು ತಿಳಿದುಕೊಳ್ಳಲು ನಾನೂ ಕಾಯುತ್ತಿದ್ದೇನೆ’ ಎಂಬುದು ಶಾಲಿನಿ ಅಭಿಪ್ರಾಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.