ಬೆಂಗಳೂರು: ಕೇಂದ್ರ ಸರ್ಕಾರವು ಅಗರಬತ್ತಿ ಮೇಲೆ ಶೇ 12 ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸುವುದಕ್ಕೆ ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.
‘ಜಿಎಸ್ಟಿ ವಿಧಿಸಿದರೆ ಗ್ರಾಮೀಣ ಮತ್ತು ಗುಡಿ ಕೈಗಾರಿಕೆ ಅವಲಂಬಿಸಿರುವ ಅಗರಬತ್ತಿ ಉದ್ಯಮದ ಮೇಲೆ ಭಾರಿ ಹೊಡೆತ ಬೀಳಲಿದೆ. ಅಲ್ಲದೆ, ಅಗರಬತ್ತಿ ಬೆಲೆಯಲ್ಲಿ ಏರಿಕೆಯಾಗಿ, ಜನಸಾಮಾನ್ಯರಿಗೆ ಹೊರೆಯಾಗಲಿದೆ’ ಎಂದು ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘದ ಅಧ್ಯಕ್ಷ ಶರತ್ ಬಾಬು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
‘ಬಹುತೇಕ ರಾಜ್ಯಗಳಲ್ಲಿ ಅಗರಬತ್ತಿಗೆ ವ್ಯಾಟ್ ಮತ್ತು ಅಬಕಾರಿ ತೆರಿಗೆ ವಿಧಿಸುತ್ತಿಲ್ಲ. ನಮ್ಮ ರಾಜ್ಯದಲ್ಲಿ ಮಾತ್ರ ‘ವ್ಯಾಟ್’ ಇದೆ. ಬಡವರು ಮತ್ತು ಮಹಿಳೆಯರು ಹೆಚ್ಚಾಗಿ ಅಗರಬತ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ.
ಹಿಂದುಳಿದ ಪ್ರದೇಶಗಳಲ್ಲಿ ಅಗರಬತ್ತಿ ತಯಾರಿಕೆ ಸ್ವಲ್ಪಮಟ್ಟಿಗೆ ನಿರುದ್ಯೋಗ ಸಮಸ್ಯೆ ನಿವಾರಿಸಿದೆ. ಗ್ರಾಮೀಣ ಭಾಗದಿಂದ ಜನರು ವಲಸೆ ಹೋಗುವುದನ್ನು ಇದು ನಿಯಂತ್ರಿಸುತ್ತಿದೆ.
ಈ ಕಾರಣಕ್ಕೆ ಸರ್ಕಾರವು ಅಗರಬತ್ತಿಯನ್ನು ಜಿಎಸ್ಟಿಯಿಂದ ಹೊರಗಿಡಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ‘ಶೇ 12 ಜಿಎಸ್ಟಿ ವಿಧಿಸಿದರೆ , ಅದರಲ್ಲಿ ಶೇ 10 ನೇರವಾಗಿ ಗ್ರಾಹಕರಿಗೆ ವರ್ಗಾವಣೆಯಾಗುವ ಸಾಧ್ಯತೆ ಹೆಚ್ಚಿದೆ’ ಎಂದರು.