ಸಾಗರ: ತಾಲ್ಲೂಕಿನ ಜೋಗದ ಸೀತಾಕಟ್ಟೆ ಸೇತುವೆ ಸಮೀಪ ನೂತನ ಅಣೆಕಟ್ಟು ನಿರ್ಮಿಸಿ ನೀರನ್ನು ಸಂಗ್ರಹಿಸಿ ಜೋಗ ಜಲಪಾತಕ್ಕೆ ಹರಿಸುವ ಮೂಲಕ ವರ್ಷವಿಡೀ ಜಲಪಾತದಲ್ಲಿ ನೀರು ಇರುವಂತೆ ನೋಡಿಕೊಳ್ಳುವ ಸರ್ವಋತು ಜೋಗ ಜಲಪಾತ ಯೋಜನೆಗೆ ತಾತ್ಕಾಲಿಕ ತಡೆ ಬಿದ್ದಿದೆ.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಭವನದಲ್ಲಿ ಈಚೆಗೆ ನಡೆದ ನದಿ ಕಣಿವೆ ಮತ್ತು ಜಲ ವಿದ್ಯುತ್ ಯೋಜನೆಗಳ ನಿಷ್ಕರ್ಷ ಸಮಿತಿ ₹ 408 ಕೋಟಿ ಮೊತ್ತದ ಸರ್ವಋತು ಯೋಜನೆಗೆ ತಡೆಯೊಡ್ಡಿದೆ ಎಂದು ಉಪವಿಭಾಗಾಧಿಕಾರಿ ಕಚೇರಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ಉದ್ಯಮಿ ಬಿ.ಆರ್.ಶೆಟ್ಟಿ ಒಡೆತನದ ಅಬುದಾಬಿ ಮೂಲದ ಬಿ.ಆರ್.ಎಸ್. ವೆಂಚರ್ಸ್ ಎಂಬ ಖಾಸಗಿ ಸಂಸ್ಥೆ ಸುಮಾರು 347 ಎಕರೆ ಪ್ರದೇಶವನ್ನು ಲೀಸ್ಗೆ ಪಡೆದು ಸರ್ವಋತು ಜೋಗ ಜಲಪಾತ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಯೋಜನಾ ವರದಿ ಸಲ್ಲಿಸಿತ್ತು.