ಇಸ್ಲಾಮಾಬಾದ್: ಕಾಶ್ಮೀರದಲ್ಲಿ ಯುವಕನೊಬ್ಬನನ್ನು ಜೀಪಿಗೆ ಕಟ್ಟಿ ಕರೆದೊಯ್ದು, ಕಲ್ಲು ತೂರುವವರ ವಿರುದ್ಧ ಮಾನವ ಗುರಾಣಿಯಂತೆ ಬಳಸಿದ್ದ ಸೇನಾಧಿಕಾರಿ ಲೀತುಲ್ ಗೊಗೋಯ್ ಅವರನ್ನು ಗೌರವಿಸಿದ ಭಾರತದ ಕ್ರಮವನ್ನು ಪಾಕಿಸ್ತಾನ ಖಂಡಿಸಿದೆ.
‘ವ್ಯಕ್ತಿಯನ್ನು ಕಾರಿಗೆ ಕಟ್ಟಿ ಗುರಾಣಿಯಂತೆ ಬಳಸಿದ್ದು ದೊಡ್ಡ ಅಪರಾಧ. ಇದು ಮಾನವತ್ವಕ್ಕೆ ಎಸಗಿದ ಅಪಮಾನ. ಈ ಬಗ್ಗೆ ವಿಶ್ವಸಂಸ್ಥೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ವಿದೇಶಾಂಗ ಕಚೇರಿ ವಕ್ತಾರ ನಫೀಜ್ ಝಕಾರಿಯಾ ಒತ್ತಾಯಿಸಿದ್ದಾರೆ.
‘ಪಾಕಿಸ್ತಾನದಲ್ಲಿ ಭಯೋತ್ಪಾದನೆ ನಡೆಸಲು ಭಾರತ ಹಣ ಹೂಡುತ್ತಿದೆ. ಇದಕ್ಕೆ ಕುಲಭೂಷಣ್ ಜಾಧವ್ ಅವರ ತಪ್ಪೊಪ್ಪಿಗೆಯೇ ಸಾಕ್ಷಿ’ ಎಂದು ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರೋಪಿಸಿದ್ದಾರೆ.