ನವದೆಹಲಿ: ದೇಶದಾದ್ಯಂತ 100 ಉದ್ಯಾನಗಳನ್ನು ವಿಶೇಷವಾಗಿ ಯೋಗ ಚಟುವಟಿಕೆಗಳಿಗಾಗಿ ಮೀಸಲಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಲಖನೌದಲ್ಲಿ ಪ್ರಮುಖ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸುಮಾರು 150 ದೇಶಗಳ ಯೋಗಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಪ್ಯಾರಿಸ್, ಲಂಡನ್ ಮತ್ತು ನ್ಯೂಯಾರ್ಕ್ ಸೇರಿದಂತೆ ವಿಶ್ವದಾದ್ಯಂತ ಪ್ರಮುಖ ನಗರಗಳಲ್ಲಿ ಯೋಗ ದಿನ ಆಚರಿಸಲಾಗುತ್ತದೆ.
ನ್ಯಾಯಮೂರ್ತಿ ವಜಾಕ್ಕೆ ಅರ್ಜಿ
ನವದೆಹಲಿ: ಆಂಧ್ರ ಪ್ರದೇಶ ಮತ್ತು ತೆಲಂಗಾಣ ಹೈಕೋರ್ಟ್ನ ನ್ಯಾಯಮೂರ್ತಿ ಸಿ.ವಿ. ನಾಗಾರ್ಜುನ ರೆಡ್ಡಿ ಅವರನ್ನು ವಜಾ ಮಾಡುವುದಕ್ಕಾಗಿ ರಾಜ್ಯಸಭೆಯ 54 ಸದಸ್ಯರು ಸಹಿ ಮಾಡಿದ ಅರ್ಜಿಯನ್ನು ರಾಜ್ಯಸಭೆಯ ಸಭಾಪತಿಗೆ ಸಲ್ಲಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಕಿರಿಯ ನ್ಯಾಯಮೂರ್ತಿಗಳಿಗೆ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮನೇಸರ್ ಭೂಕಬಳಿಕೆ ಪ್ರಕರಣ: ಇ.ಡಿ ದಾಳಿ
ನವದೆಹಲಿ: ಗುರುಗ್ರಾಮ ಬಳಿಯ ಮನೇಸರ್ನಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಡೆದಿರಬಹುದಾದ ಅವ್ಯವಹಾರ, ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು (ಇ.ಡಿ) ಹರಿಯಾಣ ಹಾಗೂ ದೆಹಲಿಯ 10 ಸ್ಥಳಗಳಲ್ಲಿ ಗುರುವಾರ ದಾಳಿ ನಡೆಸಿತು.