ಬೆಂಗಳೂರು: ವಿದ್ಯಾರಣ್ಯಪುರ ಸಮೀಪದ ವಿಘ್ನೇಶ್ವರ ಲೇಔಟ್ನಲ್ಲಿ ಬುಧವಾರ ರಾತ್ರಿ ದಿವ್ಯಾ (26) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ನಾನು ಐದಾರು ವರ್ಷಗಳಿಂದ ಆರ್.ಟಿ.ನಗರದ ‘ಡಿಎಸ್ಎ’ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ನನಗೆ ಫ್ಲೋರ್ ಮ್ಯಾನೇಜರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಆದರೆ, ಆ ಹುದ್ದೆಯನ್ನು ಸರಿಯಾಗಿ ನಿಭಾಯಿಸಲಿಲ್ಲ ಎಂದು ಮತ್ತೆ ಹಿಂಬಡ್ತಿ ನೀಡಲಾಯಿತು.
ಇದರಿಂದ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ದಿವ್ಯಾ ಬರೆದಿಟ್ಟಿರುವ ಪತ್ರ ಸಿಕ್ಕಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ರಾತ್ರಿ 8 ಗಂಟೆಗೆ ತಮ್ಮ ಮೂರು ವರ್ಷದ ಮಗನನ್ನು ತಾಯಿ ಮನೆಗೆ ಕಳುಹಿಸಿರುವ ದಿವ್ಯಾ, ನಂತರ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಪತಿ ಚಿನ್ಮಯ್ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.