ಶಿರಾ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಹಾಗೂ ಭಾರಿ ಬಿರುಗಾಳಿಗೆ ಸುಮಾರು 10 ಸಾವಿರ ಅಡಿಕೆ ಮರಗಳು, ನಾಲ್ಕು ಸಾವಿರ ತೆಂಗಿನಮರಗಳು ನೆಲಸಮವಾಗಿದ್ದು, ನಾಲ್ಕು ನೂರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.
ಕಾಳಾಪುರ ಗ್ರಾಮದಲ್ಲಿ ಸಿಡಿಲು ಬಡಿದು ಜಯರಾಮಯ್ಯ (75) ಎಂಬುವರು ಮೃತಪಟ್ಟಿದ್ದಾರೆ. ಕಾಳಪುರ, ಮಾವನಹಳ್ಳಿ, ದೇವರಹಟ್ಟಿ, ದೊಡ್ಡಚಿಕ್ಕಗೂಳ, ಬೈರಾಪುರ, ಮಾಯಸಂದ್ರ, ತಾಳಗುಂದ, ಶಿರಾದಡು, ಮುಚ್ಚವೀರನಹಳ್ಳಿ, ಚಿಕ್ಕತಿಮ್ಮನಹಳ್ಳಿ, ಚೆನ್ನೇನಹಳ್ಳಿ, ಹೊನ್ನೇನಹಳ್ಳಿ ಗ್ರಾಮಗಳಲ್ಲಿ ತೀವ್ರ ಹಾನಿಯಾಗಿದೆ.
‘ಫಲ ಬಿಡುವ ಅಡಿಕೆ ಮತ್ತು ತೆಂಗಿನಮರಗಳನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ತಕ್ಷಣ ಸರ್ಕಾರ ನೆರವಿಗೆ ಬರಬೇಕು’ ಎಂದು ತಾಳಗುಂದದ ರೈತ ಚಂದ್ರಣ್ಣ ಹೇಳಿದರು.