ಬೆಂಗಳೂರು: ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ಉಪ ಆಯುಕ್ತೆ ಸರ್ವರ್ ಮರ್ಚಂಟ್ ಅವರನ್ನು ಅಮಾನತುಗೊಳಿಸಲು ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಉಪ ಕಾರ್ಯದರ್ಶಿಯಾಗಿದ್ದ ಸರ್ವರ್ ಮರ್ಚಂಟ್ ಎರವಲು ಸೇವೆ ಮೇಲೆ ಪಾಲಿಕೆಯ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಎಚ್.ಎಂ.ಟಿ. ವಾರ್ಡ್ 38ರಲ್ಲಿ 4 ವರ್ಷಗಳ ಹಿಂದೆ ನಡೆದಿರುವ ಕಾಮ ಗಾರಿಯ ಬಿಲ್ ಮೊತ್ತ ₹ 28 ಲಕ್ಷ ಪಾವತಿಸಲು ಗುತ್ತಿಗೆದಾರರಿಂದ ಲಂಚ ಪಡೆದ ಬಗ್ಗೆ ಕೆಲ ವಾಹಿನಿಗಳು ಸುದ್ದಿ ಪ್ರಸಾರ ಮಾಡಿದ್ದವು. ಇದರಿಂದ ಪಾಲಿಕೆಯ ಹೆಸರಿಗೂ ಧಕ್ಕೆ ಉಂಟಾಗಿತ್ತು. ಅಲ್ಲದೆ, ಈ ಅಧಿಕಾರಿ ವಿರುದ್ಧ ಸಾರ್ವಜನಿಕರಿಂದಲೂ ಹಲವು ದೂರುಗಳು ಪಾಲಿಕೆಗೆ ಬಂದಿದ್ದವು.