ಬೆಂಗಳೂರು: ಎಂಎಸ್ಐಎಲ್ ಸುವರ್ಣ ಮಹೋತ್ಸವದಲ್ಲಿ ಸಂಸ್ಥೆಯ ಹೊಸ ಉತ್ಪನ್ನಗಳಾದ ‘ಕ್ಲಾಸ್1’ ಬ್ರಾಂಡ್ ಕುಡಿಯುವ ನೀರು, ಮರಳು, ಸೌಂದರ್ಯ ಸೋಪು, ಲೇಖನ ಸಾಮಗ್ರಿ ಕಿಟ್, ಜನೌಷಧ ಬಿಡುಗಡೆ ಮಾಡಲಾಯಿತು.
ನಗರದ ಲಲಿತ್ ಅಶೋಕ್ ಹೋಟೆಲ್ನಲ್ಲಿ ಗುರುವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಆರ್.ವಿ. ದೇಶಪಾಂಡೆ ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆ ಮಾಡಿದರು.
‘ಸಂಸ್ಥೆ ಚಿಟ್ಫಂಡ್ ಆರಂಭಿಸಿದ ತಕ್ಷಣ ಅನಧಿಕೃತವಾಗಿ ನಡೆಯುತ್ತಿದ್ದ ಚಿಟ್ಫಂಡ್ ಸಂಸ್ಥೆಗಳು ಬಾಗಿಲು ಮುಚ್ಚಿವೆ. ಸರ್ಕಾರ ಎಷ್ಟೇ ಪ್ರಯತ್ನಿಸಿ ದರೂ ಮರಳು ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ವಿದೇಶಗಳಿಂದ ಮರಳು ಆಮದು ಮಾಡಿಕೊಂಡು, ರಾಜ್ಯದ ಜನರಿಗೆ ಕಡಿಮೆ ಬೆಲೆಯಲ್ಲಿ ಮರಳು ಒದಗಿಸುವ ಜವಾಬ್ದಾರಿಯನ್ನು ಸಂಸ್ಥೆಗೆ ವಹಿಸಲಾಗಿದೆ’ ಎಂದರು.
ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸ್ಥೆ ರಾಜ್ಯದಾದ್ಯಂತ ಜನೌಷಧಿಯ 174 ಕೇಂದ್ರ ತೆರೆಯುತ್ತಿದೆ. ಔಷಧದ ಹೆಸರಿ ನಲ್ಲಿ ನಡೆಯುತ್ತಿರುವ ಸುಲಿಗೆ ತಪ್ಪಿಸಿ, ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧ ಒದಗಿಸಬೇಕು. ಇದಕ್ಕೆ ಸರ್ಕಾರ ಸಹಕಾರ ನೀಡಲಿದೆ ಎಂದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ. ಪ್ರಕಾಶ್, ಮರಳು ಆಮದಿಗೆ ಜಾಗತಿಕ ಟೆಂಡರ್ ಕರೆಯಲಾಗಿದೆ. ಮಯನ್ಮಾರ್, ಕಾಂಬೋಡಿಯಾ, ಫಿಲಿಫೈನ್ಸ್, ಮಲೇಷಿಯಾದಿಂದ ಮರಳು ಆಮದು ಮಾಡಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದರು.