ಮನಗೂಳಿ (ಬಸವನಬಾಗೇವಾಡಿ): ಮಹಿಳೆಯರು ಧಾರವಾಹಿಗಳಿಗೆ ಮಾರು ಹೋಗದೇ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದರೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಜೆಡಿಎಸ್ ಮುಖಂಡ ಅಪ್ಪುಗೌಡ ಪಾಟೀಲ ಹೇಳಿದರು.
ಪಟ್ಟಣದ ಹಿರೇಮಠದ ಸಂಗನ ಬಸವ ಶಿವಾಚಾರ್ಯ ಸ್ವಾಮೀಜಿ ಅವರ 34ನೇ, ಡಾ. ಮಹಾಂತ ಶಿವಾಚಾರ್ಯರ 4ನೇ ಪುಣ್ಯಾರಾಧನೆ ಹಾಗೂ ಅಭಿನವ ಸಂಗನಬಸವ ಶಿವಾಚಾರ್ಯರ ಅನುಷ್ಠಾನ ಮುಕ್ತಾಯ ಸಮಾರಂಭದ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ನಾಡಿಗೆ ಉತ್ತಮ ಮಳೆ ಬೆಳೆ ಬಂದು ರೈತರ ಬದುಕು ಹಸನಾಗಬೇಕು. ಜನರು ನೆಮ್ಮದಿಯ ಜೀವನ ಸಾಗಿಸಬೇಕು. ಸಮಾಜದಲ್ಲಿ ಸಾಮರಸ್ಯ ಹೆಚ್ಚಳ ವಾಗುವುದರೊಂದಿಗೆ ಪ್ರತಿಯೊಬ್ಬರೂ ಸುಖಿ ಜೀವನ ನಡೆಸಲಿ ಎಂಬ ಉದ್ದೇಶದಿಂದ ಅಭಿನವ ಸಂಗನಬಸವ ಸ್ವಾಮೀಜಿ ಅವರು 11 ದಿನಗಳ ಕಾಲ ಅನ್ನ, ನೀರು ಇಲ್ಲದೆ ಅನುಷ್ಠಾನ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಬುರಣಾಪುರದ ಯೋಗೇಶ್ವರ ಮಾತಾಜಿ ಮಾತನಾಡಿ, ಸತ್ಯ ಸಾಕ್ಷಾತ್ಕಾರ ತಿಳಿದುಕೊಳ್ಳುವುದೇ ಅನುಷ್ಠಾನ ವಾಗಿದ್ದು, ಲೋಕಹಿತಕ್ಕಾಗಿ ಮಹಾತ್ಮರು ಗುಡ್ಡಗಾಡು ಪ್ರದೇಶಗಳಲ್ಲಿ ಕುಳಿತು ಆಚಾರ- ವಿಚಾರಗಳನ್ನು ಅನುಭಾವ ಗಳಿಂದ ಅನುಷ್ಠಾನಗೈದರು, ಲೋಕದ ಹಿತಕ್ಕಾಗಿ ಅನುಷ್ಠಾನಗೈದು ಮಳೆ ಬೆಳೆ ಸಮೃದ್ಧಿಗಾಗಿ ತಪಸ್ಸನ್ನು ಮಾಡಿದರು.
ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಸಂತ- ಮಹಾತ್ಮರನ್ನು ಸ್ಮರಣೆಮಾಡುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಪಟ್ಟಿಕಂಥಿ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯರು, ಕೇಸರಟ್ಟಿಯ ಸೋಮಲಿಂಗ ಸ್ವಾಮಿಜಿ, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಸ್ವಾಮೀಜಿ ಕಾಂಗ್ರೆಸ್ ಮುಖಂಡ ರಮೇಶ ಸುಳಿಭಾವಿ, ಎಪಿಎಂಸಿ ನಿರ್ದೇಶಕ ವಿಶ್ವನಾಥ ಪಾಟೀಲ, ಮಾತನಾಡಿದರು, ಬಬಲೇಶ್ವರದ ಡಾ. ಮಹಾದೇವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಆಲಗೂರದ ಧರಿದೇವರ ಲಕ್ಷ್ಮಣ ಮುತ್ಯಾ, ಭೀಮರಾಯ ಶಿರಾಡೋನ, ಪ.ಪಂ ಅಧ್ಯಕ್ಷ ಮಾದೇವ ಪವಾರ ವೇದಿಕೆಯಲ್ಲಿದ್ದರು. ಮಲ್ಲಯ್ಯ ಮಠ ಸ್ವಾಗತಿಸಿ ನಿರೂಪಿಸಿದರು, ಮಹಾಂತೇಶ ಮನಗೂಳಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.