ಧಾರವಾಡ: ಕೇಂದ್ರ ಬಿಜೆಪಿ ಸರ್ಕಾರವು ಜನ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಿಪಿಎಂ (ಭಾರತ ಕಮ್ಯುನಿಸ್ಟ್ ಪಕ್ಷ) ಮುಖಂಡರು ಗುರುವಾರ ಪ್ರತಿಭಟನೆ ನಡೆಸಿದರು.
‘ನೂರು ದಿನಗಳಲ್ಲಿ ದೇಶದ ಸಂಕಷ್ಟ ಪರಿಹರಿಸಲಾಗುವುದು ಎಂದು ಹೇಳಿದ್ದ ಬಿಜೆಪಿಯು, ಸಾವಿರ ದಿನ ಪೂರೈಸಿದರೂ ಬಡವರ, ಮಧ್ಯಮ ವರ್ಗಕ್ಕಾಗಿ ಯಾವುದೇ ನೀತಿ ಜಾರಿಗೊಳಿಸಿಲ್ಲ’ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಮುಖಂಡರು ಆರೋಪಿಸಿದರು.
‘ಗುತ್ತಿಗೆ ಕಾರ್ಮಿಕರ ಶೋಷಣೆ ನಿಲ್ಲಬೇಕು, ಕನಿಷ್ಠ ವೇತನ ₹ 18 ಸಾವಿರ ನಿಗದಿಯಾಗಬೇಕು. ಆಹಾರ ಭದ್ರತೆ ಹೆಚ್ಚಿಸಬೇಕು. ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ ಪರಿಣಾಮಕಾರಿಯಾಗಬೇಕು’ ಎಂದು ಘೋಷಣೆ ಕೂಗಿದರು.
‘ಸಕ್ಕರೆ, ಸೀಮೆ ಎಣ್ಣೆ ವಿತರಣೆಯನ್ನು ಮುಂದುವರೆಸಬೇಕು. ಎಲ್ಲ ಅಗತ್ಯ ವಸ್ತುಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಹಾಯಧನದ ಆಧಾರದಲ್ಲಿ ದೊರೆಯುವಂತೆ ವ್ಯವಸ್ಥೆ ಮಾಡುವಂತೆ’ ಒತ್ತಾಯ ಮಾಡಿದರು.
‘ಈಗಾಗಲೇ ವಿವಿಧೆಡೆ ಅರಣ್ಯಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ರೈತರಿಗೂ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಲಾಭಾಂಶ ಸಿಗುವಂತೆ ನೀತಿ ರೂಪಿಸಬೇಕು. ಬರಗಾಲ, ಅತಿವೃಷ್ಟಿಯಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರ ತಡೆಗೆ ಗಂಭೀರ ಕ್ರಮ ಅನುಸರಿಸಬೇಕು’ ಎಂದು ಆಗ್ರಹಿಸಿದರು.
‘ಸಾರ್ವಜನಿಕ ಉದ್ಯಮದ ಖಾಸಗೀಕರಣಕ್ಕೆ ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರವು ಮುಂದಾಗಬಾರದು. ಕೂಡಲೇ ಬ್ಯಾಕ್ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಖಾಸಗಿ ರಂಗದಲ್ಲಿಯೂ ಮೀಸಲಾತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಸೊಪ್ಪಿನ, ಆರ್.ಎಚ್.ಆಯಿ, ಬಿ.ಐ. ಈಳಿಗೇರ, ಬಿ.ಎನ್.ಪೂಜಾರಿ, ಮಹೇಶ ಪತ್ತಾರ, ಎಂ.ಎಸ್.ಹಡಪದ, ಮಾರುತಿ ಚಿಟಗಿ, ಬಸವರಾಜ ಮಂತೂರ, ಮಹೇಶ ಹಿರೇಮಠ, ಪಿರೂ ರಾಠೋಡ, ಬಸವರಾಜ ಪೂಜಾರ, ರೇಣುಕಾ ಕೆ. ಪಾಲ್ಗೊಂಡಿದ್ದರು.