ದೊಡ್ಡಬಳ್ಳಾಪುರ:ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿ ವರ್ಷದಂತೆ ಈ ವರ್ಷವೂ ವಿಶೇಷ ದಾಖಲಾತಿ ಅಂದೋಲನ ಹಾಗೂ ಸಾಮಾನ್ಯ ದಾಖಲಾತಿ ಅಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಹೇಳಿದರು.
ಅವರು ನಗರದ ಜವಾಹರ್ ನವೋದಯ ವಿದ್ಯಾಲಯದಲ್ಲಿ ನಡೆದ ಮುಖ್ಯ ಶಿಕ್ಷಕರ ಸಭೆಯಲ್ಲಿ ಮಾತನಾಡಿದರು. ಮೇ 31 ರವರೆಗೆ ವಿಶೇಷ ದಾಖಲಾತಿ ಅಂದೋಲನವನ್ನು ಈಗಾಗಲೇ ಶಾಲಾಹಂತದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಶಾಲೆಯಿಂದ ಹೊರಗುಳಿದ ಎಲ್ಲ ಮಕ್ಕಳನ್ನು ಗುರುತಿಸಿ ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ವಿಶೇಷ ದಾಖಲಾತಿ ಅಂದೋಲನದ ಮುಖ್ಯ ಉದ್ದೇಶವಾಗಿದೆ ಎಂದರು.
ಮೇ 29 ರಂದು ಶಾಲೆ ಪ್ರಾರಂಭವಾಗಲಿದ್ದು, 30 ರಂದು ತಳಿರುತೋರಣಗಳಿಂದ ಶಾಲೆಯನ್ನು ಸಿಂಗರಿಸಿ ಹಬ್ಬದ ವಾತಾವರಣವನ್ನು ಉಂಟು ಮಾಡಿ ಶಾಲಾ ಪಾರಂಭೋತ್ಸವ ಆಚರಿಸಬೇಕು ಅಲ್ಲದೆ ಶಾಲೆಯ ಪ್ರಾರಂಭದ ಮೊದಲ ದಿನವೇ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಬೇಕು.
ಜೂನ್ 5 ರಿಂದ ಮಿಂಚಿನ ಸಂಚಾರ ನಡೆಯಲಿದ್ದು ಅಧಿಕಾರಿಗಳ ತಂಡವು ಶಾಲೆಗೆ ಭೇಟಿ ನೀಡಿ ಭೌತಿಕ ಮತ್ತು ಶೈಕ್ಷಣಿಕ ಸಿದ್ಧತೆಯ ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಇಸಿಒ ಭೀಮರಾಜ್, ಪ್ರಹ್ಲಾದ್,ರುದ್ರೇಶ್ ಎಲ್ಲ ಸಿಆರ್ಪಿಗಳು ಹಾಗೂ ಮುಖ್ಯ ಶಿಕ್ಷಕರು ಹಾಜರಿದ್ದರು.