ನವದೆಹಲಿ: ಕೊಲ್ಲುವ ಉದ್ದೇಶಕ್ಕಾಗಿ ಪ್ರಾಣಿಗಳ ಮಾರುಕಟ್ಟೆಯಲ್ಲಿ ಜಾನುವಾರುಗಳನ್ನು ಮಾರಾಟ ಮಾಡುವುದರ ಮೇಲೆ ನಿಷೇಧ ಹೇರಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಆದೇಶದ ಅನ್ವಯ, ಜಾನುವಾರುಗಳನ್ನು ಕೃಷಿ ಉದ್ದೇಶಕ್ಕೆ ಮಾತ್ರ ಖರೀದಿಸಬಹುದಾಗಿದೆ. ಈ ನಿರ್ಧಾರವು ದೇಶದ ಮಾಂಸ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
‘ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ಜಾನುವಾರು ಮಾರುಕಟ್ಟೆಗಳ ನಿಯಂತ್ರಣ) ನಿಯಮ–2017’ ಅನ್ನು ಅಂತಿಮಗೊಳಿಸಿ ಕೇಂದ್ರ ಪರಿಸರ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಪರಿಸರ ಸಚಿವರಾಗಿದ್ದ ಅನಿಲ್ ದವೆ ಅವರು ನಿಧನರಾಗುವುದಕ್ಕೂ ಮುನ್ನ ಈ ಹೊಸ ನಿಯಮಗಳಿಗೆ ಒಪ್ಪಿಗೆ ಸೂಚಿಸಿದ್ದರು.
‘ವಧಿಸುವ ಉದ್ದೇಶಕ್ಕಾಗಿ ಪಶುಗಳನ್ನು ಮಾರುಕಟ್ಟೆಗೆ ತರಲಾಗಿಲ್ಲ ಎಂಬುದನ್ನು ಪ್ರಾಣಿಗಳ ಮಾರುಕಟ್ಟೆ ಸಮಿತಿಯ ಸದಸ್ಯ ಕಾರ್ಯದರ್ಶಿ ದೃಢಪಡಿಸಿಕೊಳ್ಳಬೇಕು’ ಎಂದು ಮೇ 23ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಮಾರುಕಟ್ಟೆಯಿಂದ ಜಾನುವಾರನ್ನು ಕೊಂಡುಹೋಗುವುದಕ್ಕೂ ಮುನ್ನ, ಅದನ್ನು ಕೃಷಿ ಉದ್ದೇಶಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ ಎಂದು ಅದರ ಮಾರಾಟಗಾರ ಮತ್ತು ಖರೀದಿದಾರನಿಂದ ಆಡಳಿತವು ಮುಚ್ಚಳಿಕೆ ಬರೆಸಿಕೊಳ್ಳಬೇಕು ಎಂದೂ ಅದು ಹೇಳಿದೆ.
ವಿರೋಧ: ಪರಿಸರ ಸಚಿವಾಲಯದ ನಿರ್ಧಾರಕ್ಕೆ ಮಾಂಸ ಉದ್ಯಮ, ಸೇರಿದಂತೆ ಸಮಾಜದ ವಿವಿಧ ವಲಯಗಳಿಂದ ವಿರೋಧ ವ್ಯಕ್ತವಾಗಿದೆ.
*
ಮಾಂಸ ಉದ್ಯಮಕ್ಕೆ ಹೊಡೆತ ಹೇಗೆ?
ದೇಶದ ಮಾಂಸ ಉದ್ಯಮವು ತನ್ನ ಸಂಪನ್ಮೂಲಗಳಿಗಾಗಿ ಜಾನುವಾರು/ಪ್ರಾಣಿ ಮಾರುಕಟ್ಟೆಗಳನ್ನೇ ಹೆಚ್ಚಾಗಿ ಅವಲಂಬಿಸಿದೆ.
*
ನಿಷೇಧ
* ಪ್ರಾಣಿಗಳಿಗೆ ಹೊಡೆಯುವುದು
* ಚರ್ಮದ ಮೇಲೆ ಬರೆ ಹಾಕುವುದು
* ಮಾರಾಟಕ್ಕಾಗಿ ಮಾರುಕಟ್ಟೆಗೆ ಕರೆತರುವಾಗ ಜಾನುವಾರುಗಳಿಗೆ ಅಲಂಕಾರ ಮಾಡುವುದು
*
ಸರ್ಕಾರದ ಈ ನಿರ್ಧಾರದಿಂದ ರೈತರಿಗೆ ಭಾರಿ ಹೊಡೆತ ಬೀಳಲಿದೆ. ಅನುತ್ಪಾದಕ ಜಾನುವಾರುಗಳನ್ನು ಸಾಕಲು ರೈತರು ಬಾರಿ ಹಣ ವ್ಯಯಿಸಬೇಕಾಗುತ್ತದೆ.
- ಅಖಿಲ ಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಸಂಘಟನೆ
*
ಅಂಕಿ ಅಂಶ
₹30 ಸಾವಿರ ಕೋಟಿ 2015–16ರಲ್ಲಿ ಭಾರತದ ಮಾಂಸ ಉದ್ಯಮದ ರಫ್ತು ವಹಿವಾಟು
₹26,681 2015–16ರಲ್ಲಿ ಎಮ್ಮೆ, ಕೋಣ ಮಾಂಸದ ರಫ್ತಿನ ವಹಿವಾಟು ಮೊತ್ತ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.