ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ರಾಂಪುರ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದಕಡೆಯಿಂದ ಭಾರತ ಗಡಿಯೊಳಕ್ಕೆ ನುಸುಳಲು ಯತ್ನಿಸುತ್ತಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಶನಿವಾರ ಹೊಡೆದುರುಳಿಸಿದೆ.
ಶನಿವಾರ ಬೆಳ್ಳಂಬೆಳಿಗ್ಗೆಯೇ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಶಸ್ತ್ರಸಜ್ಜಿತ ಗುಂಪಿನ ಉಗ್ರರ ಅನುಮಾನಾಸ್ಪದ ಚಲನವಲನವನ್ನು ಸೇನೆ ಶುಕ್ರವಾರ ರಾತ್ರಿ ಗಮನಿಸಿದೆ.
ಉಗ್ರರು ಸೇನಾ ಸಿಬ್ಬಂದಿಯತ್ತ ಗುಂಡುಹಾರಿಸಿದ್ದು, ಪ್ರತಿಯಾಗಿ ಸೇನೆ ಗುಂಡಿನ ದಾಳಿ ನಡೆಸಿ ನಾಲ್ವರು ಯೋಧರನ್ನು ಹೊಡೆದುರುಳಿಸಿದೆ ಎಂದು ಸೇನೆ ಮೂಲಗಳು ತಿಳಿಸಿವೆ.
ಉಗ್ರರ ಗುಂಪಿನಲ್ಲಿ ಆರರಿಂದ ಏಳು ಮಂದಿ ಇದ್ದ ಬಗ್ಗೆ ಶಂಕೆ ಇದ್ದು, ನಾಲ್ವರನ್ನು ಹೊಡೆದುರುಳಿಸಲಾಗಿದೆ. ಇನ್ನುಳಿದ ಮೂವರು ಅಡಗಿ ಕುಳಿತಿರಬಹುದು ಅಥವಾ ಪಾಕಿಸ್ತಾನಕ್ಕೆ ಹಿಂದಿರುಗಿರಬಹುದು. ಸೇನೆ ಉಗ್ರರಿಗಾಗಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಶುಕ್ರವಾರ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ದಿನ ಬಳಿಕ ಮತ್ತೆ ನಾಲ್ವರು ಉಗ್ರರನ್ನು ಸೇನೆ ಬಲಿ ಪಡೆದಿದೆ.