ಮಂಡ್ಯ: ಮಣಪ್ಪುರಂ ಫೈನಾನ್ಸ್ನವರು ಗಿರವಿಟ್ಟ ರೈತರ ಒಡವೆ ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ನಗರದ ಹೊಳಲು ವೃತ್ತದ ಬಳಿ ಇರುವ ಮಣಪ್ಪುರಂ ಫೈನಾನ್ಸ್ ಎದುರು ಶುಕ್ರವಾರ ಪ್ರತಿಭಟನೆ ಮಾಡಿದರು.
ಹೊಳಲು ಗ್ರಾಮದ ರೈತರಾದ ಚೇತನ್, ದರ್ಶನ್ ಅವರ ಒಡವೆಗಳನ್ನು ಮಣಪ್ಪುರಂ ಫೈನಾನ್ಸ್ನವರು ಹರಾಜು ಹಾಕಿದ್ದಾರೆ. ಆದರೆ, ಇದರಿಂದ ನೊಂದ ರೈತರು ನಮಗೆ ಅವಮಾನ ಆಗಿದೆ. ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗೇನಾದರು ಆದರೆ ಮಣಪ್ಪುರಂ ಸಂಸ್ಥೆಯೇ ನೇರ ಹೊಣೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬರಗಾಲ ಇದೆ. ಬೆಳೆ ಕೂಡ ಈ ಬಾರಿ ಆಗಿಲ್ಲ. ರೈತ ಇನ್ನಷ್ಟು ಕಂಗಾಲಾಗಿದ್ದಾನೆ. ಇದನ್ನು ಅರ್ಥ ಮಾಡಿಕೊಳ್ಳದ ಸಹಕಾರಿ, ಖಾಸಗಿ ಬ್ಯಾಂಕ್ಗಳು ರೈತರು ಗಿರವಿ ಇಟ್ಟ ಇಟ್ಟ ಒಡವೆ ಹರಾಜು ಹಾಕಲು ಹೊರಟಿರುವ ಕ್ರಮ ಸರಿಯಿಲ್ಲ. ಇದು ತಕ್ಷಣ ನಿಲ್ಲಬೇಕು ಎಂದು ಒತ್ತಾಯಿಸಿದರು.
ಫೈನಾನ್ಸ್ ಅಧಿಕಾರಿಗಳಾದ ಪ್ರಸಾದ್, ಮಧುಸೂದನ್ ಹರಾಜು ಹಾಕಿರುವ ಒಡವೆ ವಾಪಸ್ ಕೊಡಿಸಲಾ ಗುವುದು ಎಂದು ಹೇಳಿದರು. ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಣಕನಹಳ್ಳಿ ನಾಗಣ್ಣ, ಕೋಣನ ಹಳ್ಳಿ ಜವರೇಗೌಡ, ನಾಗರಾಜು ಹೊಳಲು, ಕನ್ನಲಿ ನವೀನ್್, ಚೇತನ್, ಜಗದೀಶ್ ಮತ್ತಿತರರ ಭಾಗವಹಿಸಿದ್ದರು.
ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಎಚ್ಚರಿಕೆ: ಜಿಲ್ಲೆಯಲ್ಲಿ ರೈತರು ಆರ್ಥಿಕ ಸಂಕಷ್ಟದಲ್ಲಿ ದ್ದಾರೆ. ಬರಗಾಲದಿಂದ ತತ್ತರಿಸಿದ್ದಾರೆ. ಇಂತಹ ಹೊತ್ತಿನಲ್ಲಿ ರೈತರು ಗಿರವಿ ಇಟ್ಟ ಒಡವೆಗಳನ್ನು ಹರಾಜು ಮಾಡುವುದು ಸರಿಯಲ್ಲ. ಇನ್ನು ಮುಂದೆ ಇಂತಹ ತಪ್ಪು ನಡೆಯಕೂಡದು, ನಡೆದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದ್ದಾರೆ.