ಹನೂರು: ಗುರುವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಸಮೀಪದ ಕೆಂಪಯ್ಯನಹಟ್ಟಿ ಗ್ರಾಮದಲ್ಲಿ ವಿದ್ಯುತ್ ಕಂಬ, ಮರಗಳು ನೆಲಕ್ಕುರುಳಿವೆ. 20ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ.
ಗ್ರಾಮದ ಮಾದೇವ ಎಂಬುವವರ ಮನೆಯ ಚಾವಣಿಯ ಹೆಂಚುಗಳು ಹಾಗೂ ಶೀಟುಗಳು ಗಾಳಿಯ ರಭಸಕ್ಕೆ ಹಾರಿಹೋಗಿವೆ. ಹೆಂಚುಗಳು ತುಂಡಾಗಿ ಬಿದ್ದು, ಗೃಹಬಳಕೆಯ ವಸ್ತುಗಳಿಗೆ ಹಾನಿ ಯಾಗಿದೆ.
ಮತ್ತೊಂದೆಡೆ ಮಾರ ಎಂಬುವವರ ತೋಟದ ಮನೆಯ ಮೇಲಿನ ಶೀಟುಗಳು ಹಾರಿಹೋಗಿದ್ದು, ಒಂದು ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ನೆಲಕಚ್ಚಿದೆ. ಗ್ರಾಮದ ಬಹುತೇಕ ಮನೆಗಳು ಹಾನಿಗೀಡಾಗಿವೆ. ರಾಮಾ ಪುರದಿಂದ ಕೆಂಪ ಯ್ಯನಹಟ್ಟಿ ಗ್ರಾಮಕ್ಕೆ ತೆರಳುವ ರಸ್ತೆ ಯುದ್ದಕ್ಕೂ ಮರಗಳು ಉರುಳಿ ಬಿದ್ದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರಗಳನ್ನು ತೆರವುಗೊಳಿಸಿದ್ದಾರೆ. ರಸ್ತೆ ಸಮೀಪದಲ್ಲಿದ್ದ ವಿದ್ಯುತ್ ಪರಿವರ್ತಕ ರಸ್ತೆಗೆ ಉರುಳಿದ್ದರಿಂದ ರಾತ್ರಿಯಿಡೀ ಗ್ರಾಮದಲ್ಲಿ ವಿದ್ಯುತ್ ಇರಲಿಲ್ಲ.‘ಬಿರುಗಾಳಿ ಬೀಸುತ್ತಿದ್ದಂತೆ ಮನೆಗೆ ಹೊರಗೆ ಬಂದೆ. ಆ ಕ್ಷಣದಲ್ಲೇ ಶೀಟು ಗಳು ಹಾರಿ ಹೋಗಿ ಗೋಡೆ ಕುಸಿದು ಬೀಳಲಾರಂಭಿಸಿತು’ ಎಂದು ಮಾದೇವ ತಿಳಿಸಿದರು.
ಮೂವರು ಆಸ್ಪತ್ರೆಗೆ: ಬಿರುಗಾಳಿ ಆರ್ಭ ಟಕ್ಕೆ ಮನೆಯ ಮೇಲಿನ ಹೆಂಚುಗಳು ಮೈಮೇಲೆ ಬಿದ್ದ ಪರಿಣಾಮ ಮೂವರು ಗಾಯಗೊಂಡು ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಗ್ರಾಮದ ವೆಂಕಟಪ್ಪ, ಮಂಗಳಮ್ಮ ಹಾಗೂ ವಿಶ್ವ ಗಾಯಗೊಂಡವರು.
ರಾಮಾಪುರ ಉಪತಹಶೀಲ್ದಾರ್ ಸುರೇಖಾ ಹಾಗೂ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಸವರಾಜು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾನಿಗೊಳಗಾಗಿರುವ ಮನೆ ಹಾಗೂ ಗಾಯಗೊಂಡಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಿ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಕಳುಹಿಸಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ತಹಶಿಲ್ದಾರ್ ಸುರೇಖಾ ತಿಳಿಸಿದರು.