ಶ್ರವಣಬೆಳಗೊಳ: ಮಹಾಮಸ್ತಕಾ ಭಿಷೇಕ ಪ್ರಯುಕ್ತ ಶ್ರವಣಬೆಳಗೊಳ ಗ್ರಾಮಾಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದು, ಮೊದಲನೆಯದಾಗಿ ಸಚ್ಛತೆಗೆ ಆಧ್ಯತೆ ನೀಡಲಾಗಿದೆ ಎಂದು ಶ್ರವಣಬೆಳಗೊಳ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾನಜಿ ಯಾತ್ರಿಕಾಶ್ರಮದ ಮುಂಭಾಗದಲ್ಲಿ ಏರ್ಪಡಿಸಿದ್ದ ಕ್ಷೇತ್ರದ ವತಿಯಿಂದ ಗ್ರಾಮ ಪಂಚಾಯಿತಿಗೆ ಉಚಿತ ವಾಹನಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘₹ 10 ಲಕ್ಷ ವೆಚ್ಚದಲ್ಲಿ 3 ತ್ರಿಚಕ್ರ ಆಪೆಆಟೊಗಳನ್ನು ಖರೀದಿಸಿದ್ದು, ನಿತ್ಯ ಪಟ್ಟಣದ ಸುತ್ತ 5 ಕಿ.ಮೀ ವ್ಯಾಪ್ತಿಯಲ್ಲಿ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಬಳಸಲಾಗುವುದು. ಈ ಕಾರ್ಯವನ್ನು ಗ್ರಾಮ ಪಂಚಾಯಿತಿ ನಿರ್ವಹಿಸುತ್ತದೆ. ವಾಹನಗಳ ನಿರ್ವಹಣೆ ನೌಕರರ ವೇತನ, ವಾಹನಕ್ಕೆ ಇಂಧನವನ್ನು ಎಸ್.ಡಿ.ಜೆ.ಎಂ.ಐ ಟ್ರಸ್ಟ್ ಭರಿಸಲಿದೆ’ ಎಂದು ಹೇಳಿದರು.
ಎ.ಮಂಜು ಮಾತನಾಡಿ, ‘ರಾಜ್ಯ ಸರ್ಕಾರವು ಸಹಕಾರ ಸಂಘಗಳ ಮೂಲಕ ₹ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯವನ್ನು ರೈತರಿಗೆ ನೀಡುತ್ತಿದೆ. ರೈತರ ಸಾಲವನ್ನು ಕೇಂದ್ರ ಸರ್ಕಾರ ಶೇ 50ರಷ್ಟು ಮನ್ನಾ ಮಾಡಲು ಒಪ್ಪಿದರೆ ಉಳಿಕೆಯ ಶೇ 50ರಷ್ಟು ಸಾಲವನ್ನು ಮನ್ನಾ ಮಾಡಲು ರಾಜ್ಯ ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾ ಪ್ರಭಾಕರ್, ಮಮತಾ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಆರ್. ವಾಸು, ರವಿ, ಕೋಲೇಶ್ ಇದ್ದರು.