ದೌಸಾ/ರಾಜಸ್ತಾನ: ‘ನಮ್ಮದು ಬಡ ಕುಟುಂಬ, ನಾನು ಸರ್ಕಾರ ನೀಡುವ ಪಡಿತರ(ರೇಷನ್)ವನ್ನು ಪಡೆದುಕೊಳ್ಳುತ್ತೇನೆ’....
ಇದು ರಾಜಸ್ತಾನದ ರಾಜಧಾನಿ ಜೈಪುರದಿಂದ 60 ಕಿಮೀ ದೂರದಲ್ಲಿರುವ ದೌಸಾ ಜಿಲ್ಲೆಯಲ್ಲಿ ಬಿಪಿಲ್ ಕಾರ್ಡ್ ಹೊಂದಿರುವ ಪ್ರತಿ ಮನೆಯ ಗೋಡೆಗಳ ಮೇಲೆ ಬಿಜೆಪಿ ಸರ್ಕಾರ ಬರೆದಿರುವ ಸಾಲುಗಳು.
ಇದನ್ನು ರಾಜ್ಯ ಸರ್ಕಾರ ಹಿಂದಿಯಲ್ಲಿ ದೊಡ್ಡದಾಗಿ ಬರೆಸಿದ್ದು, 1.5 ಲಕ್ಷಕ್ಕೂ ಹೆಚ್ಚು ಮನೆಗಳ ಗೋಡೆಗಳ ಮೇಲೆ ಈ ರೀತಿಯ ವಾಕ್ಯಗಳು ಕಾಣುತ್ತಿವೆ.
ಇದರಿಂದ ಮುಖ್ಯಮಂತ್ರಿ ವಸುಂಧರೇ ರಾಜೇ ಹಾಗೂ ಬಿಜೆಪಿ ಸರ್ಕಾರ ಜನರ ಟೀಕೆಗೆ ಗುರಿಯಾಗಿದ್ದಾರೆ.
ರಾಜ್ಯಸರ್ಕಾರದ ಈ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಭಂಕ್ರೆ ಗ್ರಾಮದ ಸೀತಾರಾಮ್ ಅವರು, ‘ಈ ಹಿಂದೆ ನಾವು ಗೋಧಿಯನ್ನು ತೆಗೆದುಕೊಂಡಿಲ್ಲ ಎಂದು ಬರೆಸಿದ್ದರು. ಯಾವಾಗ ರೇಷನ್ ತೆಗೆದುಕೊಳ್ಳಲು ಪ್ರಾರಂಭಿಸಿದೆವೋ ಆಗ ಈ ರೀತಿ ಬರೆಸಿದ್ದಾರೆ’ ಎಂದು ಹೇಳಿದ್ದಾರೆ.
‘ನಾನು 15 ಕೆಜಿ ಗೋಧಿಯನ್ನು ತೆಗೆದುಕೊಂಡೆ. ಇದನ್ನು ಸಹ ಗೋಡೆ ಮೇಲೆ ಬರೆಸಿದರು. ಕೆಲವರು ನಿಮ್ಮ ಮನೆಯ ಗೋಡೆಯ ಮೇಲೆ ಬರೆದಿರುವುದು ಏನು ಎಂದು ಕೇಳುತ್ತಾರೆ. ನನಗೆ ಅವಮಾನವಾಗುತ್ತದೆ. ಜನರು ತಮಾಷೆ ಮಾಡುತ್ತಾರೆ. ನಾನು ಬಡವ, ಜೊತೆಗೆ ನಾನು ತಮಾಷೆಯ ವಸ್ತು’ ಎನ್ನುತ್ತಾರೆ ಸೋನಿ ದೇವಿ.