ಯಳಂದೂರು: ತಾಲ್ಲೂಕಿನ ಮದ್ದೂರು ಗ್ರಾಮದ ಉಪ್ಪಾರ ಹೊಸ ಬಡಾವಣೆಯಲ್ಲಿ ‘ನರೇಗಾ’ ಅಡಿ ನಿರ್ಮಿಸಿರುವ ರಸ್ತೆಗೆ ಮಣ್ಣು ಮಾತ್ರ ಸುರಿದು ಹಾಗೆಯೇ ಬಿಡಲಾಗಿದೆ. ಈ ಮಣ್ಣು ಮಳೆಗೆ ಸಿಲುಕಿ ಅಲ್ಲಲ್ಲಿ ನೀರು ನಿಂತು ನಡೆದಾಡಲು ಕಷ್ಟವಾಗಿದೆ...
ನಿಜ. ಈ ಬಡಾವಣೆ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇಲ್ಲಿ 30 ಕುಟುಂಬಗಳಿವೆ. ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆ ಹೇಳತೀರದು. ಬಡಾವಣೆ ತಗ್ಗು ಪ್ರದೇಶದಲ್ಲಿ ಇದೆ. ಹಾಗಾಗಿ, ಮಳೆ ಸುರಿದರೆ ಸಂಪೂರ್ಣವಾಗಿ ನೀರಿನಿಂದ ಆವೃತವಾಗುತ್ತದೆ. ಚರಂಡಿ ನಿರ್ಮಿಸದ ಕಾರಣ ನೀರು ನಿಂತು ಮಾಲಿನ್ಯವಾಗಿದೆ.
ಈ ಹಿಂದೆ ಗ್ರಾಮ ಪಂಚಾಯಿತಿಯಿಂದ ‘ನರೇಗಾ’ ಅಡಿ 74 ಮೀಟರ್ ರಸ್ತೆಗೆ ₹ 2 ಲಕ್ಷ ಅನುದಾನ ನೀಡಲಾಗಿತ್ತು. ಆದರೆ, ರಸ್ತೆಗೆ ಮಣ್ಣು ಮಾತ್ರ ಹಾಕಿ ಕೈಬಿಡಲಾಗಿದೆ. ಕಾಮಗಾರಿ ಅಪೂರ್ಣಗೊಂಡಿದ್ದರೂ ಬಿಲ್ ಮಾಡಲಾಗಿದೆ ಎಂಬುದು ಗ್ರಾಮದ ಪುಟ್ಟಸುಬ್ಬಯ್ಯ, ರಂಸ್ವಾಮಿ ಅವರ ದೂರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಡಿಒ ಪುಟ್ಟರಾಜು, ಮಳೆಯಿಂದಾಗಿ ಮಣ್ಣು ಕೊಚ್ಚಿಹೋಗಿದೆ. ಹಾಗಾಗಿ, ರೋಲರ್ ಮಾಡಲಾಗಿಲ್ಲ. ರಸ್ತೆ ಅಪೂರ್ಣಗೊಂಡ ಕಾರಣ ಮೆಟೀರಿಯಲ್ ಬಿಲ್ ತಡೆ ಹಿಡಿಯಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ರಸ್ತೆ ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದು’ ಎಂದರು.