ನವದೆಹಲಿ: ಅಮೆರಿಕ ಪ್ರವಾಸದ ವೇಳೆ ಎಚ್1ಬಿ ವೀಸಾ ವಿಚಾರವನ್ನು ಪ್ರಸ್ತಾಪ ಮಾಡದೆ ಹಿಂದಿರುಗಿದ ನರೇಂದ್ರ ಮೋದಿ ಅವರು ‘ದುರ್ಬಲ ಪ್ರಧಾನಿ’ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಟೀಕಿಸಿದ್ದಾರೆ.
ಕೇಂದ್ರ ಮಧ್ಯ ಪ್ರವೇಶ
ಕೋಲ್ಕತ್ತ: ರಾಜ್ಯದ ಕಾನೂನು ಪಾಲನೆ ಕುರಿತು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಕೆ.ಎನ್. ತ್ರಿಪಾಠಿ ಅವರ ನಡುವೆ ಭುಗಿಲೆದ್ದಿರುವ ವಿವಾದವನ್ನು ತಣ್ಣಗಾಗಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿದೆ. ಗೃಹಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಇಬ್ಬರ ಜತೆಗೂ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಮಾತನಾಡಿ, ಭಿನ್ನಾಭಿಪ್ರಾಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಐಎಎಫ್ ಹೆಲಿಕಾಪ್ಟರ್ ಅವಶೇಷ ಪತ್ತೆ
ಇಟಾನಗರ: ಅರುಣಾಚಲ ಪ್ರದೇಶದ ಪಾಪುಮ್ ಜಿಲ್ಲೆಯಲ್ಲಿ ಮಂಗಳವಾರ ನಾಪತ್ತೆಯಾಗಿದ್ದ ವಾಯುಪಡೆ ಹೆಲಿಕಾಪ್ಟರ್ ನ ಅವಶೇಷಗಳು ಪತ್ತೆಯಾಗಿವೆ. ಆದರೆ ಅದರಲ್ಲಿ ಇದ್ದ ಮೂವರು ಚಾಲನಾ ಸಿಬ್ಬಂದಿಯ ಬಗ್ಗೆ ಮಾತ್ರ ಇದುವರೆಗೆ ಯಾವುದೇ ಮಾಹಿತಿ ಬಂದಿಲ್ಲ.
ವಿಮಾನದಲ್ಲಿ ಲ್ಯಾಪ್ಟಾಪ್ಗೆ ಅನುಮತಿ
ನವದೆಹಲಿ: ಟರ್ಕಿಷ್ ಏರ್ಲೈನ್ ಮತ್ತು ಎಮಿರೇಟ್ಸ್ ವಿಮಾನಗಳಲ್ಲಿ ಅಮೆರಿಕಕ್ಕೆ ಸಂಚರಿಸುವ ಪ್ರಯಾಣಿಕರು ಈಗ ತಮ್ಮ ಜೊತೆ ಲ್ಯಾಪ್ಟಾಪ್, ಕ್ಯಾಮೆರಾ ಮತ್ತು ಯಾವುದೇ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಕೊಂಡೊಯ್ಯಬಹುದು.
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಎಮಿರೇಟ್ಸ್ ವಿಮಾನದಲ್ಲಿ ಹಾಗೂ ಇಸ್ತಾಂಬುಲ್ನ ಅಟಾಟುರ್ಕ್ ವಿಮಾನ ನಿಲ್ದಾಣದಿಂದ ಟರ್ಕಿಷ್ ಏರ್ಲೈನ್ನಲ್ಲಿ ಪ್ರಯಾಣಿಸುವವರಿಗೆ ಈ ಸೌಲಭ್ಯ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಾಧನಗಳನ್ನು ಕೊಂಡೊಯ್ಯಲು ಮೇ ತಿಂಗಳಿನಲ್ಲಿ ನಿಷೇಧ ಹೇರಲಾಗಿತ್ತು.
‘ಬಿಜೆಪಿ ಮುಖಂಡರಿಗೆ ಗೌರವ ನೀಡಿ’
ಲಖನೌ: ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ಗೌರವ ನೀಡಿ ಎಂದು ಉತ್ತರ ಪ್ರದೇಶದ ಇಂಧನ ಇಲಾಖೆ ತನ್ನ ಅಧಿಕಾರಿಗಳಿಗೆ ನೀಡಿರುವ ನಿರ್ದೇಶನ, ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.