ಹೈದರಾಬಾದ್: ನಟಿ ಶ್ರೀದೇವಿ ಬಾಹುಬಲಿ ಚಿತ್ರದಲ್ಲಿ ನಟಿಸಲು ಹೆಚ್ಚು ಸಂಭಾವನೆ ಕೇಳಿದ್ದರಿಂದ ಅವರನ್ನು ನಿರಾಕರಿಸಲಾಗಿತ್ತು ಎಂದು ನಿರ್ದೇಶಕ ಎಸ್.ಎಸ್. ರಾಜಮೌಳಿ ಹೇಳಿಕೆ ನೀಡಿದ್ದರು.
ಇತ್ತೀಚಿಗೆ ಈ ಕುರಿತು ಪ್ರತಿಕ್ರಿಯಿಸಿದ ಶ್ರೀದೇವಿ, ರಾಜಮೌಳಿ ಹೇಳಿಕೆಯಿಂದ ಬೇಸರವಾಗಿದೆ ಎಂದು ತಿಳಿಸಿದ್ದರು.
ಇದೀಗ ರಾಜಮೌಳಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದು, ‘ನಟಿ ಶ್ರೀದೇವಿ ಅವರ ಬಗ್ಗೆ ಆಪಾರ ಗೌರವವಿದೆ, ಜತೆಗೆ ಪ್ರಸ್ತುತ ಬಿಡುಗಡೆಯಾಗಿರುವ ‘ಮಾಮ್’ ಚಿತ್ರ ಹೆಚ್ಚು ಯಶಸ್ಸು ಗಳಿಸಲೆಂದು ಅಶಿಸುತ್ತೇನೆ ಎಂದು ಹೇಳಿದ್ದಾರೆ.
ಬಾಹುಬಲಿ, ಬಾಹಬಲಿ–2 ಚಿತ್ರದ ರಾಜಮಾತಾ ಶಿವಗಾಮಿ ಪಾತ್ರಕ್ಕಾಗಿ ಶ್ರೀದೇವಿ ಅವರೊಂದಿಗೆ ನಿರ್ದೇಶಕ ಎಸ್.ಎಸ್.ರಾಜಮೌಳಿ ಮಾತುಕತೆ ನಡೆಸಿದ್ದರು. ನಂತರ ಶ್ರೀದೇವಿ ಅವರ ಪಾತ್ರಕ್ಕೆ ಟಾಲಿವುಡ್ ನಟಿ ರಮ್ಯಾ ಕೃಷ್ಣಾ ಅವರನ್ನು ಆಯ್ಕೆ ಮಾಡಲಾಗಿತ್ತು.
‘ಬಾಹುಬಲಿ ಚಿತ್ರದಲ್ಲಿ ನಟಿಸಲು ಶ್ರೀದೇವಿ ಅವರು ಒಪ್ಪಿಕೊಳ್ಳದಿದ್ದದ್ದು ಅನುಕೂಲವಾಯಿತು’ ಎಂದು ಟಿವಿ ಸಂದರ್ಶನವೊಂದರಲ್ಲಿ ರಾಜಮೌಳಿ ಹೇಳಿಕೆ ನೀಡಿದ್ದರು.
ನಿರ್ದೇಶಕ ರಾಜಮೌಳಿ ನೀಡಿದ ಹೇಳಿಕೆ ನಟಿ ಶ್ರೀದೇವಿ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಶ್ರೀದೇವಿ ಅಭಿನಯದ ಮಾಮ್ ಚಿತ್ರ ವಿಶ್ವದಾದ್ಯಂತ ತೆರೆಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.