ಬಳ್ಳಾರಿ: ‘ಪೊಲೀಸ್ ದೂರು ಪ್ರಾಧಿಕಾರಗಳ ಕುರಿತು ಜನರಲ್ಲಿ ಜಾಗೃತಿ ಮೂಡುತ್ತಿದ್ದು, ಗಂಭೀರ ದುರ್ನಡತೆಯ ಆರೋಪದ ಮೇರೆಗೆ ಮೂರು ತಿಂಗಳಲ್ಲಿ ರಾಜ್ಯದ 40 ಪೊಲೀಸ್ ಅಧಿಕಾರಿಗಳ ಮೇಲೆ ಪ್ರಾಧಿಕಾರದಲ್ಲಿ ದೂರು ದಾಖ ಲಾಗಿವೆ’ ಎಂದು ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಅಧ್ಯಕ್ಷ ಎ.ಎಸ್.ಪಾಶ್ಚಾಪುರೆ ಹೇಳಿದರು.
ಪ್ರಾಧಿಕಾರಗಳ ಕುರಿತು ಜಾಗೃತಿ ಮೂಡಿಸಲು ನಗರದ ಜಿಲ್ಲಾ ವಕೀಲರ ಸಂಘದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಪ್ರಾಧಿಕಾರ ಶಿಫಾರಸು ಮಾಡಲಿದೆ’ ಎಂದರು.
‘ಪ್ರಾಧಿಕಾರಗಳ ಕುರಿತು ಜನರಲ್ಲಿ ಜಾಗೃತಿ ಇಲ್ಲದಿದ್ದುದರಿಂದ ಈ ಮುಂಚೆ ದೂರುಗಳು ಸಲ್ಲಿಕೆಯಾಗುತ್ತಿರಲಿಲ್ಲ. ಈಗ ಹೆಚ್ಚು ಜಾಗೃತಿ ಮೂಡಲಿ ಎಂಬ ಉದ್ದೇಶದಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದ್ದು 20 ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯಕ್ರಮಗಳು ನಡೆದಿವೆ’ ಎಂದರು.
ದೂರು ಸ್ವೀಕರಿಸಲಿಲ್ಲ: ‘ಠಾಣೆಯಲ್ಲಿ ಅಧಿಕಾರಿಗಳು ದೂರು ಸ್ವೀಕರಿಸಲಿಲ್ಲ. ಗೌರವ ಕೊಡಲಿಲ್ಲ. ಕುಳಿತುಕೊಳ್ಳಿ ಎಂದೂ ಹೇಳಲಿಲ್ಲ ಎಂಬ ದೂರುಗಳು ಪ್ರಾಧಿಕಾರಕ್ಕೆ ಬಂದಿವೆ. ಠಾಣೆಗೆ ಯಾರೇ ಬರಲಿ ಅವರನ್ನು ಗೌರವದಿಂದ ಕಾಣುವುದು ಮತ್ತು ಜನಸ್ನೇಹಿಯಾಗಿ ಸ್ಪಂದಿಸುವುದು ಅಧಿಕಾರಿ–ಸಿಬ್ಬಂದಿಯ ಹೊಣೆ’ ಎಂದರು.
‘ಡಿವೈಎಸ್ಪಿ ಹಂತದವರೆಗಿನ ದುರ್ನಡತೆ ಮತ್ತು ಅಧಿಕಾರ ದುರುಪ ಯೋಗದ ದೂರುಗಳನ್ನು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದಲ್ಲಿ ದಾಖಲಿಸಬಹುದು. ಡಿವೈಎಸ್ಪಿಯಿಂದ ಎಡಿಜಿಪಿವರೆಗಿನ ದುರ್ನಡತೆಯ ಮತ್ತು ಅಧಿಕಾರ ದುರುಪಯೋಗ ದೂರು ಗಳನ್ನು ರಾಜ್ಯ ಪ್ರಾಧಿಕಾರಕ್ಕೆ ಸಲ್ಲಿಸಬಹುದು’ ಎಂದರು.
ಪ್ರಾಧಿಕಾರದ ಸದಸ್ಯ ಎಂ.ಆರ್. ಕಾಂಬ್ಳೆ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಸಂಘದ ಅಧ್ಯಕ್ಷ ಬದ್ರಿನಾಥ್, ಕಾರ್ಯದರ್ಶಿ ರವಿ ರಾಜಶೇಖರ ರೆಡ್ಡಿ ಇದ್ದರು.