ಚಿಂತಾಮಣಿ: ತಾಲ್ಲೂಕಿನ ಕುರುಬೂರಿನ ಕೃಷಿ ಹಾಗೂ ರೇಷ್ಮೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಯೋಜನೆಯನ್ವಯ ಕಡದಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಲ್ಲಾಂಡ್ಲಹಳ್ಳಿ ಗ್ರಾಮದಲ್ಲಿ ಮೂರು ತಿಂಗಳ ಶಿಬಿರ ಹಮ್ಮಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕ ಎಂ.ಪಾಪಿರೆಡ್ಡಿ, ‘ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತರಗತಿಗಳಿಗಿಂತ ರೈತರ ಜಮೀನುಗಳಲ್ಲಿ ಪ್ರಾಯೋಗಿಕವಾಗಿ ಕಲಿಯಬೇಕು. ಪ್ರಗತಿಪರ ರೈತರ ಅನುಭವಗಳನ್ನು ಸ್ವೀಕರಿಸಬೇಕು’ ಎಂದು ಸಲಹೆ ನೀಡಿದರು.
ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜನಾರ್ದನ್ ಮಾತನಾಡಿ, ‘ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ಕಾರ್ಯ ಮತ್ತು ಚಟುವಟಿಕೆಗಳ ವಿಧಾನ ಬದಲಿಸಿಕೊಳ್ಳಬೇಕು. ರೈತರ ಹೊಲ,ಗದ್ದೆಗಳಲ್ಲಿ ಪ್ರಾಯೋಗಿಕ ವಾಗಿ ಕಲಿಯವ ಅಭ್ಯಾಸ ಮಾಡಿಕೊಳ್ಳಬೇಕು’ ಎಂದರು.
ರೈತ ಮಂಜುನಾಥ್ ಅವರ ಜಮೀನಿನಲ್ಲಿ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಾತ್ಯಕ್ಷಿಕೆ ಮೂಲಕ ಮಣ್ಣಿನ ಮಹತ್ವ, ಮಾದರಿ ಪರೀಕ್ಷೆ ಮತ್ತು ಪರಿಣಾಮಗಳ ಬಗ್ಗೆ ಶಿಬಿರಾರ್ಥಿಗಳು ರೈತರಿಗೆ ಮಾಹಿತಿ ತಿಳಿಸಿಕೊಟ್ಟರು.
ಶಿಬಿರ ಮುಗಿಯುವುದರ ಒಳಗೆ ಗ್ರಾಮದ ಎಲ್ಲ ರೈತರ ಜಮೀನುಗಳ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು. ಸುಧಾರಿತ ಬೇಸಾಯ, ಬೆಳೆ ಪದ್ಧತಿ ವಿಷಯಗಳ ಕುರಿತು ಗುಂಪು ಚರ್ಚೆ, ಸಂವಾದ ನಡೆಸಲಾಗುವುದು ಎಂದು ಶಿಬಿರಾರ್ಥಿಗಳು ತಿಳಿಸಿದರು.
ಮುಖಂಡ ರಾಜಾರೆಡ್ಡಿ, ಕೃಷಿ ವಿದ್ಯಾರ್ಥಿಗಳಾದ ಎಂ.ಸುಹಾಸ್, ಸುಪ್ರೀತ್, ವೀರಭದ್ರಪ್ಪ, ಯೋಗೇಶ್, ಸುಮನ್ ಕುಮಾರ್, ಎಂ.ಆರ್. ವೆಂಕಟೇಶ್, ಕಾರ್ತಿಕ್, ವೆಂಕಟೇಶ್, ಸುನಿಲ್ ಕುಮಾರ್, ಎಂ.ಸುಮಂತ್, ಪ್ರತೀಕ್ ಚೌವಾಣ್ ಇದ್ದರು.