ಆಲಮಟ್ಟಿ(ನಿಡಗುಂದಿ): ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಳದಿಂದ ಸಂಗ್ರಹವಾಗುವ ನೀರನ್ನು ಬಳಸಿ ನೀರಾವರಿ ಕಲ್ಪಿಸುವ ಯುಕೆಪಿ ಹಂತ–3ರ ಅನುಷ್ಠಾನ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇಲ್ಲಿಯ ಸಮುದಾಯ ಭವನದಲ್ಲಿ ಶುಕ್ರವಾರ ಸಾರ್ವಜನಿಕರ ಸಭೆ ನಡೆಸಿತು.
ಪರಿಸರ ಸಲಹೆಗಾರ ಸಂತೋಷಕುಮಾರ ಮಾತನಾಡಿ, ‘ಆಲಮಟ್ಟಿ ಜಲಾಶಯವನ್ನು 519.60 ಮೀ. ದಿಂದ 524.256 ಮೀ. ಗೆ ಎತ್ತರಿಸಿದಾಗ ಹೆಚ್ಚುವರಿಯಾಗಿ ಸಂಗ್ರಹ ಗೊಳ್ಳುವ 130 ಟಿಎಂಸಿ ಅಡಿ ನೀರಿ ನಿಂದ 7 ಜಿಲ್ಲೆಗಳ 20 ತಾಲ್ಲೂಕುಗಳ ವ್ಯಾಪ್ತಿಯ 13 ಲಕ್ಷ 10 ಸಾವಿರ ಎಕರೆ ಭೂಮಿ ನೀರಾವರಿಗೊಳ್ಳುವುದು’ ಎಂದರು.
ಸರೂರ ತಾಂಡಾದ ಮನೋಜ ನಾಯಕ ಮಾತನಾಡಿ, ‘ಕಾಲುವೆಗಳ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಕಾಲುವೆಯ ಕೊನೆಯ ಅಂಚಿನವರೆಗೆ ನೀರು ಹರಿಯುತ್ತಿಲ್ಲ ಎಂದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಅವಟಿ ಮಾತನಾಡಿ, ‘ಜಲಾಶಯ ಎತ್ತರದಿಂದ ಹಾಗೂ ಯೋಜನೆ ಜಾರಿಯಿಂದ ಲಕ್ಷಾಂತರ ಮರಗಳು ನಾಶವಾಗುತ್ತವೆ, ಅದಕ್ಕಾಗಿ ಕಾಲುವೆಗುಂಟ ಸಸಿಗಳನ್ನು ನೆಟ್ಟು ಪೋಷಿಸಬೇಕು’ ಎಂದರು.
ಕೃಷ್ಣಾ ತೀರ ಮುಳುಗಡೆ ಸಂತ್ರಸ್ತರ ಕ್ಷೇಮಾಭಿವೃದ್ಧಿ ಸಂಸ್ಥೆ ಯೋಜನಾ ಸಂಯೋಜಕ ಬಿ.ಎಚ್. ಗಣಿ ಹಾಗೂ ಸಂಚಾಲಕ ಜಿ.ಸಿ. ಮುತ್ತಲದಿನ್ನಿ ಮಾತನಾಡಿ, ‘ಆಲಮಟ್ಟಿ ಯೋಜನೆಯ ಮೊದಲ ಹಂತದ ಸಂತ್ರಸ್ತರ ಪರಿಸ್ಥಿತಿ ಅಯೋಮಯವಾಗಿದೆ. ಜಲಾಶಯ ಎತ್ತರದಿಂದ ಮೊದಲರೆಡು ಹಂತಗಳಲ್ಲಿ ಮುಳುಗಡೆಯಾದ ಗ್ರಾಮಗಳ ಅಳಿದುಳಿದ ಜಮೀನು ಮತ್ತೆ ಮುಳುಗಿ, ಆ ಗ್ರಾಮಸ್ಥರು ಜಮೀನು ರಹಿತರಾಗುತ್ತಾರೆ, ಮೂರನೇ ಹಂತದಲ್ಲಿ ಮುಳುಗಡೆಯಾಗುವವರಿಗೆ ನೀಡುವ ಸೌಲಭ್ಯ ಹಿಂದಿನ ಸಂತ್ರಸ್ತರಿಗೂ ವಿಸ್ತರಿಸಬೇಕು’ ಎಂದರು.
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಮಾತನಾಡಿ,‘ ಸಂತ್ರಸ್ತರ ಕಷ್ಟಗಳು, ಭಾವನೆಗಳು ಅರ್ಥವಾಗಿದ್ದು, ಅದನ್ನು ಸರ್ಕಾರಕ್ಕೆ ತಿಳಿಸುತ್ತೇನೆ’ ಎಂದರು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರ ಣಾಧಿಕಾರಿ ರಮೇಶ ಬಿಜಾಪುರ, ಎಸ್ಇ ಎಸ್.ಎಚ್. ಮಂಜಪ್ಪ, ಎಸ್.ಎ. ಇನಾಮದಾರ ಇದ್ದರು.