ಮುಂಬೈ: ವ್ಯಕ್ತಿಯೊಬ್ಬನನ್ನು ರಸ್ತೆಯಲ್ಲಿ ಹೊಡೆದು ಸಾಯಿಸುವುದು ಅಥವಾ ಒಬ್ಬ ವ್ಯಕ್ತಿ ನಿರ್ದಿಷ್ಟ ವಿಷಯವನ್ನು ಒಪ್ಪದೇ ಇದ್ದರೆ ಆತನನ್ನು ಸಾಮಾಜಿಕ ತಾಣದಲ್ಲಿ ನಿಂದಿಸುವುದು ದೇಶಭಕ್ತಿ ಎಂದೆನಿಸಿಕೊಳ್ಳುತ್ತಿದೆ! ಹೀಗೆ ಹೇಳಿದ್ದು ಬಾಲಿವುಡ್ ನಟ ಕುನಾಲ್ ಕಪೂರ್.
ಭಾರತ ಪಾಕಿಸ್ತಾನ ನಡುವೆ ಪಂದ್ಯ ನಡೆಯುತ್ತಿರುವಾಗ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿ ಕೂಗುವುದು ಮಾತ್ರ ದೇಶಭಕ್ತಿಯಲ್ಲ. ನಮ್ಮ ದೇಶದ ಐಕ್ಯತೆಗೆ ನೆರವಾಗುವ ಸಿದ್ಧಾಂತಗಳ ಪರವಾಗಿ ನಿಲ್ಲುವುದೇ ದೇಶಭಕ್ತಿ,. ದೇಶದಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಸಮಾನವಾದ ಅವಕಾಶ ಸಿಗಬೇಕು ಎಂದು ಕುನಾಲ್ ಹೇಳಿದ್ದಾರೆ.
'ರಾಗ್ ದೇಶ್' ಎಂಬ ಸಿನಿಮಾದ ಪ್ರಚಾರಕ್ಕಾಗಿ ಪಂಜಾಬ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಕುನಾಲ್, ನಮ್ಮ ದೇಶದಲ್ಲೀಗ ಒಬ್ಬ ವ್ಯಕ್ತಿ ಯಾವುದಾದರೂ ವಿಷಯವನ್ನು ಒಪ್ಪದೇ ಇದ್ದರೆ ಆತನ ವಿರುದ್ಧ ಪ್ರತಿಭಟನೆ ನಡೆಸುವುದು ಕೂಡಾ ದೇಶಭಕ್ತಿ ಎನಿಸಿಕೊಳ್ಳುತ್ತಿದೆ ಎಂದಿದ್ದಾರೆ.
ಏತನ್ಮಧ್ಯೆ, ಪಾಕಿಸ್ತಾನದ ನಟರಿಗೆ ಬಾಲಿವುಡ್ನಲ್ಲಿ ನಟಿಸಲು ಅವಕಾಶ ನೀಡಬೇಕೆ ಎಂದು ಕೇಳಿದಾಗ ಕುನಾಲ್ ಉತ್ತರಿಸಿದ್ದು ಹೀಗೆ.
ಕರಣ್ ಜೋಹರ್ ಅವರ 'ಯೇ ದಿಲ್ ಹೈ ಮುಷ್ಕಿಲ್' ಸಿನಿಮಾದಲ್ಲಿ ಪಾಕ್ ನಟ ಫವಾದ್ ಖಾನ್ ಅವರು ನಟಿಸಿದ್ದಕ್ಕಾಗಿ ಆ ಸಿನಿಮಾವನ್ನು ಹಲವಾರು ಮಂದಿ ವಿರೋಧಿಸಿದ್ದರು. ಇದಾದ ನಂತರ ಇತ್ತೀಚೆಗೆ ತೆರೆ ಕಂಡ 'ಮಾಮ್' ಚಿತ್ರದಲ್ಲಿ ಪಾಕಿಸ್ತಾನಿ ನಟ ಅಭಿನಯಿಸಿದ್ದಾರೆ. ಇದಕ್ಕೆ ಯಾವ ರೀತಿಯ ವಿರೋಧವೂ ವ್ಯಕ್ತವಾಗಿಲ್ಲ. ಯಾರಿಗೂ ಇದರಲ್ಲಿ ಸಮಸ್ಯೆ ಇರಲಿಲ್ಲ. ಪಾಕಿಸ್ತಾನದ ನಟರಿಗೆ ಅವಕಾಶ ನೀಡಬಾರದು ಎಂಬ ನಿಯಮ ಮಾಡುವುದೇ ಆದರೆ ಅದು ಎಲ್ಲರಿಗೂ ಅನ್ವಯವಾಗಲೇ ಬೇಕು. ಒಬ್ಬೊಬ್ಬರಿಗೆ ಒಂದೊಂದು ನಿಯಮ ಎಂಬಂತೆ ಇರಬಾರದು. ನಮ್ಮ ದೇಶದಲ್ಲಿ ಈ ರೀತಿಯ ದ್ವಂದ್ವಗಳು ನಡೆಯುತ್ತಲೇ ಇರುತ್ತವೆ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.