ಚಿಟಗುಪ್ಪ: ಪಟ್ಟಣದಲ್ಲಿನ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೊಮೆಟ್ರಿಕ್ ವ್ಯವಸ್ಥೆ ಅಳವಡಿಸಬೇಕು ಎಂದು ಆಗ್ರಹಿಸಿ ಪಟ್ಟಣದ ನಿವಾಸಿಗಳು ವಿಶೇಷ ತಹಶೀಲ್ದಾರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಕಳೆದ ಮೂರು ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯವರು ಖಾಸಗಿ ಇಂಟರ್ನೆಟ್ ಕೆಫೆಗಳ ಮೂಲಕ ಪಡಿತರ ಚೀಟಿದಾರರಿಗೆ ಕೂಪನ್ ಕೊಡುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪಡಿತರ ಧಾನ್ಯ ಪಡೆಯುವುದು ಫಲಾನುಭವಿಗಳಿಗೆ ಕಷ್ಟವಾಗುತ್ತಿದೆ. ಹಲವು ಬಾರಿ ಅಧಿಕಾರಿಗಳಿಗೆ ಮಾಹಿತಿ ಸಲ್ಲಿಸಿದ್ದರೂ ಯಾವುದೆ ಪ್ರಯೋಜನ ಆಗಿಲ್ಲ ಎಂದು ನೂರುಲ್ಲ ಇಸ್ಲಾಮ್ ಪ್ರಜಾವಾಣಿ ಗೆ ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಶಿರಸ್ತೆದಾರ್ ವಿಶಾಲ್, ತಾಲ್ಲೂಕು ಆಹಾರ ನಿರೀಕ್ಷಣಾಧಿಕಾರಿ ನೀಲಮ್ಮ ಮಾತನಾಡಿ, ‘ಒಂದು ವಾರದ ಒಳಗಾಗಿ ಎಲ್ಲ ನ್ಯಾಯ ಬೆಲೆ ಅಂಗಡಿಗಳಲ್ಲಿ ಬಯೊಮೆಟ್ರಿಕ್ ಅಳವಡಿಸಿಕೊಳ್ಳಲು ಆದೇಶ ನೀಡಲಾಗಿದೆ.
ಮೂರು ತಿಂಗಳಿನಿಂದ ಬಯೊ ಮೆಟ್ರಿಕ್ ಅಳವಡಿಸಿಕೊಳ್ಳದಿರುವುದಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ’ ಎಂದು ತಿಳಿಸಿದರು. ನಿಜಾಮೊದ್ದೀನ್, ಹಬೀಬ್, ರಾಶೀದ್ ಪಟೇಲ್, ಮೋಹಿಸ್ ಬಾರುದ ವಾಲೆ, ಶಕೀಲ್, ಮಹ್ಮದ್ ಹುಸೇನ್ ಫರೀದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.