ಗಂಗಾವತಿ: ನರೇಗಾ ಯೋಜನೆ ಅಡಿ ಮಾಡಿದ ಕೆಲಸಕ್ಕೆ ಕೂಲಿ ಪಾವತಿಸುವಂತೆ ಮಹಿಳೆಯರು ತಾಲ್ಲೂಕಿನ ಶ್ರೀರಾಮನಗರದ ಗ್ರಾಮ ಪಂಚಾಯಿತಿ ಕಚೇರಿಗೆ ಬುಧವಾರ ಬೀಗಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ಒಂದರಿಂದ ಐದನೇ ವಾರ್ಡ್ನ ಸುಮಾರು ನೂರಕ್ಕೂ ಹೆಚ್ಚು ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಬಂದು ಕೂಲಿ ಪಾವತಿಗೆ ಆಗುತ್ತಿರುವ ವಿಳಂಭಕ್ಕೆ ಕಾರಣ ಏನು ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗಮ್ಮ, ‘ಕಳೆದ ನಾಲ್ಕೈದು ತಿಂಗಳಿಂದ ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ, ಸಕಾಲಕ್ಕೆ ಹಣ ಸಿಗುತ್ತಿಲ್ಲ. ನಾಲ್ಕು ತಿಂಗಳ ವೇತನ ಬಾಕಿ ಇದೆ’ ಎಂದು ದೂರಿದರು.
ಈಗಾಗಲೆ 400ಕ್ಕೂ ಹೆಚ್ಚು ಜನ ಕಳೆದ 120 ದಿನ ಕೆಲಸ ಮಾಡಿದ್ದು, ಎಂಟು ಲಕ್ಷ ರೂಪಾಯಿ ಬಾಕಿ ಇದೆ ಎಂದರು.
ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಟೂರಿ ಶ್ರೀನಿವಾಸ, ಕೂಲಿಕಾರರಿಗೆ ಒಂದೂವರೆ ಲಕ್ಷ ಪಾವತಿ ಮಾಡಲಾಗಿದೆ. ಇನ್ನುಳಿದ ಹಣ ಪಾವತಿಗೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.