ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ಸೇನೆಯು ಕದನವಿರಾಮ ಉಲ್ಲಂಘಿಸಿದ ಪರಿಣಾಮ ಇಬ್ಬರು ನಾಗರಿಕರು ಮೃತ
ಪಟ್ಟಿದ್ದಾರೆ ಎಂದು ಆರೋಪಿಸಿ ಭಾರತದ ಡೆಪ್ಯುಟಿ ಹೈಕಮಿಷನರ್ ಜೆ.ಪಿ. ಸಿಂಗ್ ಅವರಿಗೆ ಗುರುವಾರ ಪಾಕಿಸ್ತಾನ ಸಮನ್ಸ್ ಜಾರಿ ಮಾಡಿದೆ.
‘2017ರಲ್ಲಿ ಭಾರತ 594 ಬಾರಿ ಕದನವಿರಾಮ ಉಲ್ಲಂಘಿಸಿದೆ. ಯಾವುದೇ ಪ್ರಚೋದನೆ ಇಲ್ಲದೆ ಭಾರತವು ಹೀಗೆ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ’ ಎಂದು ‘ಸಾರ್ಕ್’ ರಾಷ್ಟ್ರಗಳ ಪ್ರಧಾನ ನಿರ್ದೇಶಕ ಮೊಹಮ್ಮದ್ ಫೈಸಲ್ ಅವರು ಸಮನ್ಸ್ನಲ್ಲಿ ಉಲ್ಲೇಖಿಸಿದ್ದಾರೆ.
* ಯುವರಾಜನ ಬಂಧನಕ್ಕೆ ಆದೇಶ ದುಬೈ (ಎಪಿ): ವ್ಯಕ್ತಿಯೊಬ್ಬರಿಗೆ ಕಿರುಕುಳ ನೀಡುತ್ತಿರುವ ವಿಡಿಯೊ ಆನ್ಲೈನ್ನಲ್ಲಿ ಬಹಿರಂಗಗೊಂಡ ಬಳಿಕ ಯುವರಾಜನನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಸೌದಿಯ ದೊರೆ ಸಲ್ಮಾನ್ ಆದೇಶಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಯೂಟ್ಯೂಬ್ನಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆಯೇ, ಬುಧವಾರ ಬೆಳಿಗ್ಗೆ ಬಂಧಿಸಲಾಗಿದೆ.
* ಭಾರತೀಯರ ತಪ್ಪೊಪ್ಪಿಗೆ ವಾಷಿಂಗ್ಟನ್ (ಪಿಟಿಐ): ಮೋಸದ ದೂರವಾಣಿ ಕರೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಬ್ಬರು ಭಾರತೀಯರು ತಪ್ಪೊಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ಭಾರತದಿಂದ ಅಮೆರಿಕದ ಇಲಿನಾಯ್ಗೆ ಹೋಗಿ ವಾಸವಾಗಿದ್ದ ಮೊಂಟು ಬರೋಟ್ ಮತ್ತು ನಿಲೇಶ್ ಪಾಂಡ್ಯ ತಪ್ಪೊಪ್ಪಿಕೊಂಡವರು. ಈ ಬಹುಕೋಟಿ ಹಗರಣದಲ್ಲಿ 54 ಮಂದಿ ಮತ್ತು ಭಾರತ ಮೂಲದ ಐದು ಕಾಲ್ ಸೆಂಟರ್ಗಳ ವಿರುದ್ಧ ದೂರು ದಾಖಲಿಸಲಾಗಿದೆ.
‘ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ ನಾಗರಿಕರಿಗೆ ಕರೆ ಮಾಡುತ್ತಿದ್ದ ಇವರು, ಸರ್ಕಾರಕ್ಕೆ ಹಣ ಪಾವತಿಸದಿದ್ದರೆ ಬಂಧಿಸುವ, ದಂಡ ವಿಧಿಸುವ ಅಥವಾ ಗಡಿಪಾರು ಮಾಡುವ ಬೆದರಿಕೆ ಒಡ್ಡುತ್ತಿದ್ದರು’ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.