ಧಾರವಾಡ: ‘ಲಿಂಗಾಯತ ಸ್ವತಂತ್ರ ಧರ್ಮ ಎಂದು ಘೋಷಿಸುವುದು ಕೇಂದ್ರ ಸರ್ಕಾರದ ಕೈಯಲ್ಲಿದೆ. ಆದರೆ, ಎಲ್ಲರೂ ಒಗ್ಗಟ್ಟಿನಿಂದ ಪ್ರಸ್ತಾವ ಸಲ್ಲಿಸಿದರೆ ಕೇಂದ್ರಕ್ಕೆ ಶಿಫಾರಸು ಮಾಡಲು ನಾನು ಸಿದ್ಧ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಇಲ್ಲಿ ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯಗೊಳಿಸಿದ್ದಕ್ಕೆ ಹಾಗೂ ವಿಜಯಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಿದ್ದಕ್ಕಾಗಿ ಇಲ್ಲಿನ ಮುರುಘಾಮಠದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
‘ಲಿಂಗಾಯತ ಹಾಗೂ ವೀರಶೈವ ಎಂಬ ಹೆಸರು ಇಡಬೇಕು ಎಂಬ ಸಲಹೆ ಈ ಹಿಂದೆಯೂ ಕೇಳಿ ಬಂದಿತ್ತು. ಆದರೆ ವೈಯಕ್ತಿಕವಾಗಿ ಲಿಂಗಾಯತ ಧರ್ಮ ಎಂಬುದೇ ಸೂಕ್ತ. ಈ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಒಂದೇ ಧ್ವನಿಯಾದರೆ ಶಿಫಾರಸು ಮಾಡುತ್ತೇನೆ’ ಎಂದರು.
‘ಈ ವಿಷಯದಲ್ಲಿ ನಾನು ಯಾವುದೇ ರಾಜಕೀಯ ಮಾಡುತ್ತಿಲ್ಲ. ಬಸವಣ್ಣನ ಬಗ್ಗೆ ಗೌರವ ಇದೆ. ಜತೆಗೆ ಅವರ ತತ್ವಕ್ಕೆ ನಿಷ್ಠೆಯೂ ಇದೆ. ಆ ಬದ್ಧತೆಯಿಂದಲೇ ಈ ಮಾತುಗಳನ್ನು ಆಡುತ್ತಿದ್ದೇನೆ’ ಎಂದು ಹೇಳಿದರು.
‘ನಾನು ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿಲ್ಲ. ಬಸವಣ್ಣನವರೂ ಇದೇ ಆಶಯದಿಂದ ಲಿಂಗಾಯತ ಧರ್ಮ ಹಾಗೂ ಅನುಭವ ಮಂಟಪ ಸ್ಥಾಪಿಸಿದ್ದರು. ಹೀಗಿದ್ದರೂ ಜಾತಿ ವ್ಯವಸ್ಥೆ ಆಳವಾಗಿ ಬೇರೂರಿದೆ. ಬಸವಣ್ಣನವರ ವಚನಗಳನ್ನು ಹೇಳುತ್ತಲೇ ಮತೀಯ ಗಲಭೆ ಸೃಷ್ಟಿಸುವ ಡೋಂಗಿಗಳು ನಮ್ಮ ನಡುವೆ ಇದ್ದಾರೆ. ಖಂಡಿತವಾಗಿಯೂ ಅವರು ಬಸವಣ್ಣನ ಅನುಯಾಯಿಗಳಾಗಿರಲು ಸಾಧ್ಯವೇ ಇಲ್ಲ’ ಎಂದರು.
‘ಮನುಷ್ಯರಿಗಾಗಿ ಧರ್ಮ ಇದೆಯೇ ಹೊರತು, ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುವವರು ಎಂದೂ ಧರ್ಮ ಮಾತ್ರವಲ್ಲ, ಮನುಕುಲದ ಪರವಾಗಿಯೂ ಇರುವುದಿಲ್ಲ’ ಎಂದರು.