ನವದೆಹಲಿ: ಈಗ ಜಾರಿಯಲ್ಲಿ ಇರುವ ಏಪ್ರಿಲ್ನಿಂದ ಮಾರ್ಚ್ವರೆಗಿನ ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್ವರೆಗೆ ಬದಲಾಯಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಗೆ ತಿಳಿಸಿದರು.
ಹಣಕಾಸು ವರ್ಷ ಬದಲಾವಣೆಗೆ ಸಂಬಂಧಿಸಿದಂತೆ ಅಧ್ಯಯನ ಮಾಡಲು ಮಾಜಿ ಆರ್ಥಿಕ ಸಲಹೆಗಾರ ಶಂಕರ್ ಆಚಾರ್ಯ ಅವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಮಿತಿಯು ವರದಿ ನೀಡಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಈಗ ಚಾಲ್ತಿಯಲ್ಲಿ ಇರುವಂತೆ ಫೆಬ್ರುವರಿಗೆ ಬದಲು ನವೆಂಬರ್– ಡಿಸೆಂಬರ್ನಲ್ಲಿ ಬಜೆಟ್ ಮಂಡಿಸಲು ಸರ್ಕಾರ ಪರಿಶೀಲನೆ ನಡೆಸುತ್ತಿದೆಯೇ ಎಂದು ಕೇಳಿದಾಗ ಜೇಟ್ಲಿ ಅದಕ್ಕೆ ಯಾವುದೇ ರೀತಿಯ ವಿವರಣೆ ನೀಡಲಿಲ್ಲ.
ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕ್ಯಾಲೆಂಡರ್ ವರ್ಷವನ್ನೇ ಹಣಕಾಸು ವರ್ಷ ಎಂದು ಪರಿಗಣಿಸಿರುವುದರಿಂದ ಮತ್ತು ಮಳೆಗಾಲ ಆರಂಭವಾಗುವ ಮೊದಲೇ ಅಗತ್ಯ ಯೋಜನೆಗಳಿಗೆ ಹಣ ವ್ಯಯ ಮಾಡಲು ಅನುಕೂಲ ಆಗುವುದರಿಂದ ದೇಶದಲ್ಲೂ ಕ್ಯಾಲೆಂಡರ್ ವರ್ಷವನ್ನೇ ಹಣಕಾಸು ವರ್ಷ ಎಂದು ಜಾರಿಗೆ ತರುವುದು ಒಳಿತು ಎಂದು ಆಚಾರ್ಯ ಸಮಿತಿ ಶಿಫಾರಸು ಮಾಡಿದೆ.