ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಾಗೂ ಕುಟುಂಬದವರ ವಿರುದ್ಧದ ಪನಾಮ ಪೇಪರ್ಸ್ ಬಹಿರಂಗ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಿರುವ ಸುಪ್ರೀಂಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.
‘ಅರ್ಜಿದಾರರ ಮತ್ತು ಪ್ರತಿವಾದಿಗಳ ಮೂಲಭೂತ ಹಕ್ಕುಗಳ ಬಗ್ಗೆ ನಮಗೆ ಅರಿವಿದೆ’ ಎಂದು ನ್ಯಾಯಮೂರ್ತಿ ಶೇಖ್ ಅಜ್ಮತ್ ಸಹೀದ್’ ಅಭಿಪ್ರಾಯಪಟ್ಟಿದ್ದಾರೆ. ಪ್ರಕರಣದ ತೀರ್ಪು ನವಾಜ್ ಷರೀಫ್ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.
ಭಾರತೀಯನ ವಿರುದ್ಧ ಭ್ರಷ್ಟಾಚಾರ ಆರೋಪ
ಸಿಂಗಪುರ: ಇಲ್ಲಿನ ವಾಯುಪಡೆಯ ಮಾಜಿ ಎಂಜಿನಿಯರ್ ಭಾರತೀಯ ಸಂಜಾತ ರಾಜ್ಕುಮಾರ್ ಪದ್ಮನಾಥನ್ ಎಂಬವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ 250ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳ ಆರೋಪ ಹೊರಿಸಿದೆ.
‘ರಾಜ್ಕುಮಾರ್ ಅವರು ಗುಡ್ವಿಲ್ ಏವಿಯೇಷನ್ ಸಿಸ್ಟಮ್ ಕಂಪೆನಿ ತಮ್ಮ ಮಾಲಕತ್ವದಲ್ಲಿದೆ ಎಂಬುದನ್ನು ಮರೆಮಾಚಿ ಸಿಂಗಪುರ ವಾಯುಪಡೆಯ ವಿಮಾನಗಳ ದುರಸ್ತಿ, ಮತ್ತು ನಿರ್ವಹಣೆಯನ್ನು ಆ ಕಂಪೆನಿಗೆ ನೀಡಲು ಸೂಚಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸಿಂಗಪುರ ವಾಯುಪಡೆಯು ಗುಡ್ವಿಲ್ ಕಂಪೆನಿಗೆ ₹4.99 ಕೋಟಿ ಹಣ ಪಾವತಿಸಿದೆ’ ಎಂದೂ ಹೇಳಿದ್ದಾರೆ.
ಶಾಂಘೈನಲ್ಲಿ ಗರಿಷ್ಠ ತಾಪಮಾನ: ಕಟ್ಟೆಚ್ಚರ
ಬೀಜಿಂಗ್ : ಚೀನಾದ ಪ್ರಮುಖ ವಾಣಿಜ್ಯ ನಗರ ಶಾಂಘೈನಲ್ಲಿ 145 ವರ್ಷಗಳ ನಂತರ ಶುಕ್ರವಾರ 40.9 ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.