ಬೆಂಗಳೂರು: 1ರಿಂದ 10ನೇ ತರಗತಿವರೆಗಿನ ಪರಿಷ್ಕೃತ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಶಾಲೆಗಳಿಗೆ ಕಳುಹಿಸಲಾಗಿದೆ.
ಪರಿಸರ ಅಧ್ಯಯನ, ಕನ್ನಡ, ಇಂಗ್ಲಿಷ್, ಸಮಾಜ ವಿಜ್ಞಾನ ಭಾಗ–1 ಮತ್ತು 2, ದೈಹಿಕ ಶಿಕ್ಷಣ ಪಠ್ಯಪುಸ್ತಕಗಳಲ್ಲಿ 200ಕ್ಕೂ ಹೆಚ್ಚು ತಪ್ಪುಗಳು ಪತ್ತೆಯಾಗಿವೆ.
‘ಪಠ್ಯಪುಸ್ತಕಗಳಲ್ಲಿನ ಮುದ್ರಣ ದೋಷ ಕುರಿತು ವಿಷಯ, ಪಾಠ ಮತ್ತು ಪುಟ ಸಮೇತ ಪಟ್ಟಿ ಸಿದ್ಧಪಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಎಲ್ಲ ಶಾಲೆಗಳಿಗೆ ತಲುಪಿಸಲಾಗಿದೆ.
ಮುಂದಿನ ವರ್ಷ ಪಠ್ಯಪುಸ್ತಕ ಮುದ್ರಣದ ವೇಳೆ ಇವುಗಳನ್ನು ಸರಿಪಡಿಸಿ ಮುದ್ರಿಸಲಾಗುತ್ತದೆ’ ಎಂದು ಕರ್ನಾಟಕ ಪಠ್ಯಪುಸ್ತಕ ಸಂಘದ ಅಧಿಕಾರಿಗಳು ತಿಳಿಸಿದ್ದಾರೆ.
ಡಾ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರಚಿಸಿತ್ತು. ಈ ಸಮಿತಿ ಪರಿಷ್ಕೃತ ಪಠ್ಯಗಳನ್ನು ಸಿದ್ಧಪಡಿಸಿತ್ತು. ಆದರೆ, ಈ ಪಠ್ಯಗಳಲ್ಲೂ ದೋಷಗಳು ಕಂಡುಬಂದಿದ್ದವು.
ಐ.ಟಿ ರಸಪ್ರಶ್ನೆ ಆಗಸ್ಟ್ 3ರಂದು ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಆಶ್ರಯದಲ್ಲಿ ‘ಟಿಸಿಎಸ್ ಐ.ಟಿ ಕ್ವಿಜ್–2017’ ನಗರದ ವೈಯಾಲಿಕಾವಲ್ನ ಚೌಡಯ್ಯ ಸಭಾಂಗಣದಲ್ಲಿ ಆಗಸ್ಟ್ 3ರಂದು ನಡೆಯಲಿದೆ.
ಇದರಲ್ಲಿ ಪಾಲ್ಗೊಳ್ಳಲು ಪ್ರವೇಶ ಶುಲ್ಕ ಇರುವುದಿಲ್ಲ. 8ನೇ ತರಗತಿಯಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತಿ ಶಿಕ್ಷಣ ಸಂಸ್ಥೆಯು 10 ತಂಡಗಳನ್ನು (ಪ್ರತಿ ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು) ಕಳುಹಿಸಬಹುದು.
ಪ್ರವೇಶ ಅರ್ಜಿಯನ್ನು ಸಂಸ್ಥೆಗಳು ಜುಲೈ 29ರೊಳಗೆ ‘ಟಿಸಿಎಸ್ ಐ.ಟಿ ಕ್ವಿಜ್ ಸಂಯೋಜಕರು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಸ್ಐಎಂ ಟವರ್, 18, ಶೇಷಾದ್ರಿ ರಸ್ತೆ, ಗಾಂಧಿನಗರ, ಬೆಂಗಳೂರು-560009’ ಗೆ ಕಳುಹಿಸಬೇಕು. ಮಾಹಿತಿಗೆ: 080-67246000