ಅಧ್ಯಾಪಕರು ಸಭ್ಯ ಉಡುಪು ಧರಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಹೊರಡಿಸಿದ ಸುತ್ತೋಲೆಗೆ ಅಧ್ಯಾಪಕ ವರ್ಗದಿಂದ ಆಕ್ಷೇಪ ವ್ಯಕ್ತವಾದ ಕಾರಣ ತನ್ನ ಸುತ್ತೋಲೆಯನ್ನು ಅದು ಹಿಂದಕ್ಕೆ ಪಡೆಯಿತು. ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತೆ ಈ ಬಗೆಗೆ ಇನ್ನೂ ಚರ್ಚೆಗಳಾಗುತ್ತಿವೆ. ಮಹಿಳಾ ಅಧ್ಯಾಪಕರನ್ನು ಉದ್ದೇಶಿಸಿ ಕೆಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ (ವಾ.ವಾ., ಜುಲೈ 21) ನಂತರ ಚರ್ಚೆ ಬಿರುಸುಗೊಂಡಿದೆ. ಈ ಚರ್ಚೆಯು ಸೀರೆ, ಪಂಚೆ ಸರಿಯುವ ಮಟ್ಟಿಗೆ ಹೇಳಿಕೆ– ಪ್ರತಿಹೇಳಿಕೆಗಳಿಂದ ಕಾವೇರಿದೆ. ಇದು ಸರಿಯಲ್ಲ.
ಪುರುಷರಾಗಲೀ, ಮಹಿಳೆಯರಾಗಲೀ ಅಧ್ಯಾಪಕರಾದವರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯ ಆಗಿರಬೇಕು. ವಿದ್ಯಾರ್ಥಿಗಳಿಗೆ ನೈತಿಕತೆಯನ್ನು ಬೋಧಿಸುವ ಮೊದಲು ಅಧ್ಯಾಪಕ ವರ್ಗದವರು ತಾವು ಅದನ್ನು ಪಾಲಿಸಿದಲ್ಲಿ ಅವರ ಮಾತಿಗೆ ಮನ್ನಣೆ ಇರುತ್ತದೆ. ಈಗಿನ ವಿದ್ಯಾರ್ಥಿಗಳು ಸೂಕ್ಷ್ಮಮತಿಗಳಾಗಿದ್ದು ಅಧ್ಯಾಪಕರ ನಡಾವಳಿ, ಬೋಧನೆ, ವ್ಯಕ್ತಿತ್ವಗಳನ್ನು ಮೌಲ್ಯಮಾಪನ ಮಾಡುವಷ್ಟು ಪ್ರಬುದ್ಧರಾಗಿದ್ದಾರೆ. ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಅಧ್ಯಾಪಕರಿಗಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ, ನಡಾವಳಿ ಮತ್ತು ಉಡುಗೆ ತೊಡುಗೆಗೆ ಸಂಬಂಧಿಸಿದ ಅಭಿರುಚಿ ರೂಪಿತವಾಗುವಲ್ಲಿ ಅಧ್ಯಾಪಕರು ಪ್ರಭಾವ ಬೀರುತ್ತಾರೆ. ಪುರುಷರಾಗಲೀ, ಮಹಿಳೆಯರಾಗಲೀ ಅಧ್ಯಾಪಕ ವರ್ಗದವರು ಅನುಕರಣೀಯ ನಡಾವಳಿಗಳನ್ನು ರೂಪಿಸಿಕೊಳ್ಳುವುದು ಅಪೇಕ್ಷಣೀಯ.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗುವ ಹಲವಾರು ಕಾನೂನುಗಳು ರೂಪುಗೊಂಡ ಸಂದರ್ಭದಲ್ಲಿ ಬಹುಪಾಲು ಅಧ್ಯಾಪಕರು ಕನಿಷ್ಠ ಪ್ರತಿಕ್ರಿಯೆ ಕೂಡ ನೀಡು
ವುದಿಲ್ಲ. ಆದರೆ ತಮಗೆ ಸಂಬಂಧಿಸಿದಂತೆ ಒಂದು ಸಣ್ಣ ಸುತ್ತೋಲೆ ಹೊರಬಿದ್ದ ಕೂಡಲೇ ಭಾರಿ ಪ್ರತಿಭಟನೆ ವ್ಯಕ್ತಪಡಿಸುತ್ತಾರೆ. ಈ ಧೋರಣೆ, ಅಧ್ಯಾಪಕ ವರ್ಗದ ನೈತಿಕತೆಯ ಬಗೆಗೆ ಸಂಶಯ ಮೂಡುವಂತೆ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರದ ಅಗತ್ಯದ ಬಗೆಗೆ ಹಾಗೂ ಮೊಬೈಲ್ ಫೋನ್ ನಿಷೇಧದ ಬಗೆಗೆ ಮಾತನಾಡುವ ಅಧ್ಯಾಪಕ ವರ್ಗದವರು, ಮೊದಲು ಅದನ್ನೆಲ್ಲ ತಾವು ಪಾಲನೆ ಮಾಡಿ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾಗಲಿ.
- ರುದ್ರೇಶ್ ಬಿ. ಅದರಂಗಿ,
ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.