ಚೆನ್ನೈ: ತಮಿಳುನಾಡಿನ ಪೋಯಸ್ ಗಾರ್ಡನ್ನಲ್ಲಿರುವ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅವರ ನಿವಾಸವನ್ನು ಸ್ಮಾರಕವಾಗಿ ಪರಿವರ್ತಿಸುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಅವರ ಸೋದರನ ಮಗಳು ಜೆ. ದೀಪಾ ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಜಯಲಲಿತಾ ಸಾವಿನ ಬಗ್ಗೆ ತನಿಖೆಗೆ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಆಯೋಗ ರಚನೆ ಹಾಗೂ ಪೋಯಸ್ ಗಾರ್ಡನ್ನಲ್ಲಿರುವ ‘ವೇದ ನಿಲಯಂ’ನ್ನು ಸ್ಮಾರಕವಾಗಿ ಪರಿವರ್ತಿಸುವುದಾಗಿ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಗುರುವಾರ ಘೋಷಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ದೀಪಾ, ಪೋಯಸ್ ನ ಆಸ್ತಿ ಹೊಂದುವ ವಿಚಾರದಲ್ಲಿ ನಾನು ‘ನೈತಿಕ ಹಾಗೂ ಕಾನೂನು ಹಕ್ಕು’ ಹೊಂದಿದ್ದೇನೆ. ಈಗ ಸ್ಮಾರಕವಾಗಿ ಪರಿವರ್ತಿಸುತ್ತಿರುವ ಮುಖ್ಯಮಂತ್ರಿಯವರು ನಾಟಕ ವಾಡುತ್ತಿದ್ದು, ಇದರ ಹಿಂದೆ ಯಾವುದೋ ಉದ್ದೇಶವಿದೆ’ ಎಂದು ದೂರಿದರು.