ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ರೈತರ ಸಂಕಷ್ಟ ನೋಡಲಾಗದೆ ಏತನೀರಾವರಿ ಯೋಜನೆಯನ್ನು ತರಲು ಸತತ ಹತ್ತು ವರ್ಷಗಳ ಕಾಲ ಶ್ರಮಪಟ್ಟಿದ್ದಕ್ಕೆ ಇಂದು ಫಲ ದೊರೆತಿದೆ’ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಸಂತಸ ವ್ಯಕ್ತಪಡಿಸಿದರು. ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಣತೂರು ಹಾಗೂ ಹಬುಕನಹಳ್ಳಿ ಏತನೀರಾವರಿಗೆ ಚಾಲನೆ ನೀಡಿ ಮಾತನಾಡಿದರು.
‘ಎಚ್.ಡಿ.ಕುಮಾರ ಸ್ವಾಮಿಯವರು ಮುಖ್ಯ ಮಂತ್ರಿಯಾಗಿದ್ದಾಗ ಈ ಯೋಜನೆಯ ಕಾಮಗಾರಿಗೆ ₹ 1.29 ಕೋಟಿ ಹಣವನ್ನು ಮಂಜೂರು ಮಾಡಿದ್ದರು. ಆನಂತರ ಹಲವು ಕಾರಣಾಂತರಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿತು. ಈ ವಿಷಯವಾಗಿ ಅಪಾರ ಸಂಖ್ಯೆಯ ರೈತರೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡ ಫಲವಾಗಿ ಈ ಭಾಗದ ಸಾವಿರಾರು ರೈತರು ನಿಟ್ಟುಸಿರು ಬಿಡುವಂತಾಗಿದೆ’ ಎಂದರು.
ಈ ಏತನೀರಾವರಿಯ ಹೇಮಾವತಿ ನೀರಿನಿಂದ ಹಬುಕನಹಳ್ಳಿ, ಕಣತೂರು, ಮಾವಿನಹಳ್ಳಿ ಸೇರಿದಂತೆ ಸುಮಾರು 10 ಹಳ್ಳಿಗಳ ರೈತರ ಕೃಷಿ ಕಾರ್ಯಚಟುವಟಿಕೆ ಹಾಗೂ ಕುಡಿಯಲು ಅನುಕೂಲವಾಗಲಿದೆ. ಈ ಭಾಗದಲ್ಲಿ ಸಮರ್ಪಕವಾಗಿ ಮಳೆಯಿಲ್ಲದೆ ಸಾವಿರಾರು ರೈತರ ತೆಂಗು ಬೆಳೆ ನಾಶವಾಗಿ ರೈತರು ಬಹಳ ವರ್ಷಗಳ ಕಾಲ ಸಂಕಷ್ಟ ಎದುರಿಸಿದ್ದರು. ಇಂದು ರೈತರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದೆ.
ಹಾಗಾಗಿ ನನ್ನ ಜೀವ ಮಾನದಲ್ಲಿಯೇ ಅತೀವ ಸಂತೋಷ ಆಗಿದೆ. ಸುಳ್ಳು, ಪೊಳ್ಳು ಭರವಸೆ ನೀಡುವ ಜಾಯಮಾನ ನನ್ನದಲ್ಲ. ಹಿಡಿದ ಕೆಲಸವನ್ನು ಮಾಡದೇ ಬಿಡುವವನೂ ನಾನಲ್ಲ. ದಬ್ಬೇಘಟ್ಟ ಹೋಬಳಿಯ ಜನ ನನ್ನನ್ನು ಕಷ್ಟ ಕಾಲದಲ್ಲಿ ಕೈಹಿಡಿದಿದ್ದೀರಿ. ನಾನು ಎಂದಿಗೂ ಮರೆಯಲಾರೆ.
ಎ.ಇ.ತೇಜಸ್, ಎ.ಇ.ಮಲ್ಲಿಕಾರ್ಜುನ್, ಎ.ಇ.ಮಹೇಶ್ ಈ ಯೋಜನೆಯ ಸಫಲತೆಗೆ ಸಹಕಾರಿಗಳಾದರು ಎಂದರು. ಮಾಜಿ ಜಿ.ಪಂ ಸದಸ್ಯ ಎಬಿ.ಜಗದೀಶ್, ಎಪಿಎಂಸಿ ಅಧ್ಯಕ್ಷ ಎಚ್.ಎಸ್.ನಾಗರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಸ್ವಾಮಿ, ಎಪಿಎಂಸಿ ನಿರ್ದೇಶಕಿ ಇಂದ್ರಮ್ಮ ಇದ್ದರು.