ನವದೆಹಲಿ/ಬೀಜಿಂಗ್ : ಭಾರತ–ಚೀನಾ–ಭೂತಾನ್ ಗಡಿಯಲ್ಲಿ 72 ದಿನಗಳಿಂದ ಉಂಟಾಗಿದ್ದ ಬಿಕ್ಕಟ್ಟು ಸೋಮವಾರ ಶಮನವಾಗಿದೆ. ಸಂಘರ್ಷದ ಕೇಂದ್ರ ಬಿಂದುವಾಗಿದ್ದ ದೋಕಲಾದಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಗೆ ಸೂಚಿಸಿವೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.
ಚೀನಾದಲ್ಲಿ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ದಕ್ಷಿಣ ಆಫ್ರಿಕಾ) ದೇಶಗಳ ಸಮಾವೇಶ ಸೆಪ್ಟೆಂಬರ್ 3–5ರವರೆಗೆ ನಡೆಯಲಿದ್ದು, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವ ಸಾಧ್ಯತೆ ಇದೆ. ಈ ಸಮಾವೇಶಕ್ಕೂ ಮುನ್ನ ಸಂಘರ್ಷ ಪರಿಹಾರವಾಗಿದೆ.
ಎರಡೂ ದೇಶಗಳು ರಾಜತಾಂತ್ರಿಕ ಸಂಪರ್ಕವನ್ನು ನಿರಂತರವಾಗಿ ಉಳಿಸಿಕೊಂಡಿದ್ದವು ಮತ್ತು ಅದರ ಮೂಲಕ ಪರಸ್ಪರರ ನಿಲುವು, ಕಳವಳ ಮತ್ತು ಹಿತಾಸಕ್ತಿಗಳನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಾಗಿದೆ. ಈ ಮಾತುಕತೆ ಮೂಲಕವೇ ಮಹತ್ವದ ರಾಜತಾಂತ್ರಿಕ ಮುನ್ನಡೆ ದೊರೆತಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ದೋಕಲಾದಿಂದ ಯೋಧ
ರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಭಾರತದ ಸೇನೆಯ ಮೂಲಗಳು ತಿಳಿಸಿವೆ.