ನವದೆಹಲಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಪ್ರಫುಲ್ಲ ಚಂದ್ರ ಪಂತ್ ಅವರು ಮಂಗಳವಾರ ನಿವೃತ್ತರಾದರು. ಹೀಗಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 25ಕ್ಕೆ ಇಳಿದಿದೆ. ಸುಪ್ರೀಂ ಕೋರ್ಟ್ನಲ್ಲಿ ಒಟ್ಟು 31 ನ್ಯಾಯಮೂರ್ತಿಗಳು ಇರಬೇಕು. ಖಾಲಿ ಹುದ್ದೆಗಳನ್ನು ತುಂಬು
ವುದು ಮುಖ್ಯ ನ್ಯಾಯಮೂರ್ತಿಯಾಗಿ ಹೊಸದಾಗಿ ನೇಮಕವಾದ ದೀಪಕ್ ಮಿಶ್ರಾ ಅವರ ಆದ್ಯತೆಯಾಗಲಿದೆ.
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಕೊಲಿಜಿಯಂನ ಶಿಫಾರಸುಗಳನ್ನು ಎದುರು ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯ ನ್ಯಾಯಮೂರ್ತಿಯಾಗಿದ್ದ ಜೆ.ಎಸ್. ಖೇಹರ್ ಅವರು ಭಾನುವಾರ ನಿವೃತ್ತರಾದರು. ಈ ವರ್ಷ ಸುಪ್ರೀಂ ಕೋರ್ಟ್ನಿಂದ ಯಾವುದೇ ನ್ಯಾಯಮೂರ್ತಿ ನಿವೃತ್ತಿಯಾಗುತ್ತಿಲ್ಲ.
ಕಳೆದ ಮೇಯಲ್ಲಿ ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ, ಅಶೋಕ್ ಭೂಷಣ್ ಮತ್ತು ಎಲ್. ನಾಗೇಶ್ವರ ರಾವ್ ಅವರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇವರಲ್ಲಿ ಮೊದಲ ಮೂವರು ವಿವಿಧ ಹೈಕೋರ್ಟ್ಗಳ ಮುಖ್ಯ ನ್ಯಾಯಮೂರ್ತಿಗಳಾಗಿದ್ದರು. ನಾಗೇಶ್ವರ ರಾವ್ ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾಗಿದ್ದರು.
2010ರ ಮೇ ತಿಂಗಳಲ್ಲಿ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ನಿವೃತ್ತರಾದ ಬಳಿಕ ಸುಪ್ರೀಂ ಕೋರ್ಟ್ನಲ್ಲಿ ವಕೀಲ ಸಮುದಾಯದಿಂದ ನೇಮಕವಾದ ನ್ಯಾಯಮೂರ್ತಿ ಇರಲಿಲ್ಲ. ಹಾಗೆಯೇ ಬಾಲಕೃಷ್ಣನ್ ನಿವೃತ್ತಿಯ ಬಳಿಕ ಪರಿಶಿಷ್ಟ ಜಾತಿಗೆ ಸೇರಿದ ನ್ಯಾಯಮೂರ್ತಿಯೂ ಇಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಈ ವರೆಗೆ ನೇಮಕವಾಗಿಯೇ ಇಲ್ಲ. ಆರ್. ಭಾನುಮತಿ ಅವರು ಈಗ ಸುಪ್ರೀಂ ಕೋರ್ಟ್ನಲ್ಲಿ ಇರುವ ಏಕೈಕ ಮಹಿಳಾ ನ್ಯಾಯಮೂರ್ತಿ.