ವಿಜಯಪುರ:‘ಮಾನವೀಯ ಮೌಲ್ಯಗಳು ನಿರಂತರ ಕುಸಿಯುತ್ತಿರುವ ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿ ಈ ಹಬ್ಬ ಮಾನವೀಯ ಏಕತೆ ಸಂದೇಶ ಸಾರುತ್ತಿದೆ’ ಎಂದು ಜಾಮೀಯಾ ಮಸೀದಿಯ ಧರ್ಮಗುರು ಮಹಮದ್ ಸಾಧಿಕ್ ಪಾಷ ಹೇಳಿದರು.
ಶಿಡ್ಲಘಟ್ಟ ಕ್ರಾಸ್ ನಲ್ಲಿ ಶನಿವಾರ ಬಕ್ರಿದ್ ಹಬ್ಬದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರು ಬಕ್ರೀದ್ ಸಂದೇಶ ಸಾರಿದರು.
‘ಸೌಹಾರ್ದತೆ ಏಕತೆ ವಾತಾವರಣ ಬಿಂಬಿಸುವ ರೀತಿಯಲ್ಲಿ ಬಕ್ರೀದ್ ಹಬ್ಬ ಆಚರಿಸುವ ಮೂಲಕ ಈ ಸಂಭ್ರಮ ಕೇವಲ ನಮಗೆ ಮಾತ್ರವಾಗಿರದೆ ನೆರೆಹೊರೆ ಎಲ್ಲಾ ಸಮುದಾಯದವರನ್ನು ಆಹ್ವಾನಿಸಿ ಆಚರಣೆ ಮಾಡಬೇಕು’ ಎಂದರು.
ಮುಸ್ಲಿಮರು ಸಂಭ್ರಮ, ಸಡಗರದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಹಬ್ಬ ಆಚರಣೆ ಮಾಡಿದರು. ಬೆಳಗಿನಿಂದಲೇ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಮುದಾಯದವರು ಮೆರವಣಿಗೆಯ ಮೂಲಕ ಶಿಡ್ಲಘಟ್ಟ ಕ್ರಾಸ್ ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಹಬ್ಬದ ಅಂಗವಾಗಿ ಹೊಸ ಉಡುಗೆಗಳನ್ನು ತೊಟ್ಟು, ಒಬ್ಬರಿಗೊಬ್ಬರು ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಮುಸ್ಲಿಂ ಬಾಂಧವರು ವಿಜಯಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಲು ಬ್ಯಾನರ್ ಹಾಕಿಕೊಂಡು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.