ಕೊಳ್ಳೇಗಾಲ: ಮಳೆಯಿಂದ ಜಲಾವೃತಗೊಂಡ ಮನೆಯನ್ನು ತಾಲ್ಲೂಕಿನ ಸತ್ತೇಗಾಲ ಗ್ರಾಮದ ಮುಖಂಡರು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸತತ ಮಳೆಯ ಪರಿಣಾಮ ಸತ್ತೇಗಾಲ ಹೊಸ ಬಡಾವಣೆ ನಿವಾಸಿ ನಂಜಯ್ಯ ಅವರ ಮನೆಗೆ ಜಮೀನುಗಳ ನೀರು ನುಗ್ಗಿತ್ತು.
ಇದರಿಂದ ಮನೆಯಲ್ಲಿದ್ದ ದವಸ, ದಾನ್ಯಗಳೆಲ್ಲವೂ ನೀರು ತುಂಬಿ ಹಾಳಾಗಿದೆ. ಕುಟುಂಬದ ಸದಸ್ಯರು ಮನೆಯನ್ನು ತೊರೆದು ಬೇರೆಡೆ ಆಶ್ರಯ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಇದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸದಸ್ಯ ನಂಜುಂಡಸ್ವಾಮಿ, ಮಾಜಿ ಅಧ್ಯಕ್ಷ ಬಸವಣ್ಣ, ಮುಖಂಡರಾದ ಸಿದ್ದರಾಜು, ಕಾಂತ, ಪುಟ್ಟ, ನಂಜುಂಡಮೂರ್ತಿ ಇತರರು ಡೀಸೆಲ್ ಮೋಟರ್ನಿಂದ ನೀರನ್ನು ತೆರವುಗೊಳಿಸಿದ್ದಾರೆ.
‘ನೀರು ತುಂಬಿಕೊಂಡಿದ್ದರಿಂದ ದವಸ ಧಾನ್ಯಗಳು ಹಾಳಾಗಿವೆ. ಇದರಿಂದ ತೀವ್ರ ನಷ್ಟಕ್ಕೆ ಒಳಗಾಗಿರುವ ನಂಜಯ್ಯ ಅವರ ಕುಟುಂಬಕ್ಕೆ ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ದೊರಕಿಸಬೇಕು’ ಎಂದು ಮುಖಂಡರು ಮನವಿ ಮಾಡಿದ್ದಾರೆ.