ಕ್ಸಿಯಾಮೆನ್: ಭಾರತ ಮತ್ತು ಚೀನಾ ನಡುವೆ ಆರೋಗ್ಯಕರ, ಸುಸ್ಥಿರ ಬಾಂಧವ್ಯ ಅವಶ್ಯ. ಉಭಯ ರಾಷ್ಟ್ರಗಳ ರಕ್ಷಣೆ ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ನಿಕಟ ಸಂವಹನದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಕ್ಸಿಯಾಮೆನ್ನಲ್ಲಿ ನಡೆಯುತ್ತಿರುವ 9ನೇ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯ ಸಂದರ್ಭ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಡೊಕ್ಲಾಂ ಗಡಿಯಲ್ಲಿ ಉಂಟಾಗಿದ್ದ ಉದ್ವಿಗ್ನ ಪರಿಸ್ಥಿತಿ ಶಮನಗೊಂಡ ಕೆಲವೇ ದಿನಗಳಲ್ಲಿ ಈ ಭೇಟಿ ನಡೆದಿದೆ.
‘ವಿಭಿನ್ನತೆಗಳನ್ನು ವಿವಾದಗಳನ್ನಾಗಿಸಲು ಬಿಡುವುದಿಲ್ಲ’ ಎಂದು ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಶೃಂಘಸಭೆಯಲ್ಲಿ ಮಾಡಿಕೊಂಡ ಒಪ್ಪಂದಕ್ಕೆ ಬದ್ಧರಾಗಿರಲು ಇಬ್ಬರೂ ನಾಯಕರು ಸಮ್ಮತಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಮಾಹಿತಿ ನೀಡಿದ್ದಾರೆ.
‘ಬಾಂಧವ್ಯಕ್ಕಾಗಿ ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡುವುದು ಅಗತ್ಯ’ ಎಂದು ಹೇಳಿರುವ ಜೈಶಂಕರ್ ಅವರು, ರಚನಾತ್ಮಕ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಎರಡೂ ದೇಶಗಳು ಸಿದ್ಧವಾಗಿವೆ ಎಂದಿದ್ದಾರೆ.