ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳ ಜೊತೆ ಬದುಕಿ..

Last Updated 6 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ರಾಶಿ ಮತ್ತು ಮಣಿಜಾ
ದೇಶದ ಹಿಂದುಳಿದ ಪ್ರದೇಶಗಳ ತಳ ಸಮುದಾಯದ ಕುಶಲಕರ್ಮಿಗಳು ಹಾಗೂ ಕಲಾವಿದರನ್ನು ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಯುವತಿಯರಿಬ್ಬರ ಸಾಧನೆಯ ಕಥೆ ಇದು. ಮುಂಬೈನ ರಾಶಿ ಮೆಹ್ತಾ ಮತ್ತು ಮಣಿಜಾ ಕಲಾವಿದರು ಮತ್ತು ಕುಶಲಕರ್ಮಿಗಳು ತಯಾರಿಸುವ ಉತ್ಪನ್ನಗಳು ಮತ್ತು ಕಲಾಕೃತಿಗಳ ಮಾರಾಟಕ್ಕೆ ವೇದಿಕೆ ಕಲ್ಪಿಸಿದ್ದಾರೆ.

ಅದಕ್ಕಾಗಿ ‘ರಿಪ್ಪಲ್‌–ಎಫೆಕ್ಟ್‌’ ಎಂಬ ಇ–ಕಾಮರ್ಸ್‌ ಕಂಪೆನಿ ಸ್ಥಾಪಿಸಿದ್ದಾರೆ. ಕಲಾವಿದರು ಮತ್ತು ಕುಶಲಕರ್ಮಿಗಳು ತಮ್ಮ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಬಹುದು. ಹಾಗೆಯೇ ಗ್ರಾಹಕರು ನೇರವಾಗಿ ಕುಶಲಕರ್ಮಿಗಳನ್ನು ಸಂಪರ್ಕಿಸಿ ಅವರ ವಸ್ತುಗಳನ್ನು ಕೊಂಡುಕೊಳ್ಳಬಹುದು.

ರಾಶಿ ಮೆಹ್ತಾ ಮತ್ತು ಮಣಿಜಾ ಇಬ್ಬರೂ ಬಾಲ್ಯದ ಗೆಳತಿಯರು. ರಾಶಿ ಡಿಜಿಟಲ್‌ ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಮಣಿಜಾ ಇವೆಂಟ್‌ ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು.

‘ಒಮ್ಮೆ ಇಬ್ಬರು ಸ್ವಯಂ ಸೇವಾ ಸಂಸ್ಥೆಯೊಂದು ಆಯೋಜಿಸಿದ್ದ ವಸ್ತು ಪ್ರದರ್ಶನಕ್ಕೆ ಹೋಗಿದ್ದಾಗ ಈ ಐಡಿಯಾ ಹೊಳೆಯಿತು’ ಎಂದು ರಾಶಿ ಹೇಳುತ್ತಾರೆ. ಅಲ್ಲಿ ಕಲಾವಿದರ ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂಬುದು ನಮ್ಮ ಅರಿವಿಗೆ ಬಂತು ಎಂದು ಮಣಿಜಾ ಹೇಳುತ್ತಾರೆ.

ಮಾರುಕಟ್ಟೆ ಮತ್ತು ಇವೆಂಟ್ ಮ್ಯಾನೇಜ್‌ಮೆಂಟ್‌ ಕ್ಷೇತ್ರದಲ್ಲಿ ಅನುಭವ ಇದುದ್ದರಿಂದ ನಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹತ್ತು ಲಕ್ಷ ರೂಪಾಯಿ ಬಂಡವಾಳದಲ್ಲಿ ರಿಪ್ಪಲ್‌–ಎಫೆಕ್ಟ್‌ ಕಂಪೆನಿ ತೆರೆದೆವು. ದೇಶದ ಗ್ರಾಮೀಣ ಪ್ರದೇಶದ ಕಲಾವಿದರು ಮಾತ್ರ ರಿಪ್ಪಲ್‌–ಎಫೆಕ್ಟ್‌ ಆನ್‌ಲೈನ್‌ ಮಾರುಕಟ್ಟೆ ತಾಣದಲ್ಲಿ ತಮ್ಮ ವಸ್ತುಗಳನ್ನು ಮಾರಾಟ ಮಾಡಬಹುದು.

ಗುಡ್ಡಗಾಡು ಮತ್ತು ಬುಡಕಟ್ಟು ಸಮುದಾಯದವರ ಉತ್ಪನ್ನ ಮತ್ತು ಕಲಾಕೃತಿಗಳ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ವಸ್ತುಗಳ ಮಾರಾಟಕ್ಕೆ ಸಮುದಾಯ ಮತ್ತು ಗ್ರಾಮೀಣ ಪ್ರದೇಶದ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸಬೇಕು. ರಿಪ್ಪಲ್‌–ಎಫೆಕ್ಟ್‌ ಆನ್‌ಲೈನ್‌ ಮಾರುಕಟ್ಟೆ ತಾಣದಲ್ಲಿನ ಜಾಹೀರಾತಿನಿಂದ ಸಂಗ್ರಹವಾಗುವ ಹಣವನ್ನು ನೋಂದಾಯಿತ ಕಲಾವಿದರಿಗೆ ಬೋನಸ್‌ ರೂಪದಲ್ಲಿ ನೀಡಲಾಗುವುದು ಎಂದು ರಾಶಿ ಹೇಳುತ್ತಾರೆ.

ಫಬೀನಾ ಡ ಸಿಲ್ವಾ
ಮಾದಕ ವಸ್ತುಗಳ ಚಟಕ್ಕೆ ಬಿದ್ದಿದ್ದ ಫಬೀನಾ ಡ ಸಿಲ್ವಾ ಇನ್ನು ಕೆಲವೇ ದಿನಗಳಲ್ಲಿ ಸಾವನ್ನಪ್ಪಲಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದರು. ನಂತರ ಸಾಂತ್ವಾನ ಆರೋಗ್ಯ ಕೇಂದ್ರಕ್ಕೆ ಅವರನ್ನು ಸೇರಿಸಲಾಯಿತು. ಅಲ್ಲಿ ಆಪ್ತಸಮಾಲೋಚಕರ ಮಾರ್ಗದರ್ಶನ, ಧರ್ಮಗುರುಗಳ ಪ್ರವಚನಗಳಿಂದ ಪ್ರಭಾವಿತರಾಗಿ ಸಾವನ್ನು ಗೆದ್ದು ಸಮಾಜಮುಖಿ ಕೆಲಸಗಳನ್ನು ಮಾಡಬೇಕು ಎಂದು ಫಬೀನಾ ನಿಶ್ಚಯಿಸಿಕೊಂಡರು. ಅದು ಅವರ ಇಚ್ಛೆಯಂತೆ ನಡೆಯಿತು, ಆತ್ಮವಿಶ್ವಾಸದ ಮುಂದೆ ಸಾವು ಕೂಡ ದೂರ ಸರಿಯಿತು!

ಫಬೀನಾ ಬ್ರೆಜಿಲ್‌ನ ಕ್ರಾಕೋಲ್ಯಾಂಡಿಯಾ ನಗರದ ನಿವಾಸಿ. ಈ ನಗರ ವಿಶ್ವದಲ್ಲೇ ಡ್ರಗ್‌ ಸಿಟಿ ಎಂದು ಕುಖ್ಯಾತಿ ಪಡೆದಿದೆ. ಇಲ್ಲೇ ಹುಟ್ಟಿ ಬೆಳೆದ ಫಬೀನಾ 16ನೇ ವಯಸ್ಸಿಗೆ ಕೋಕೆನ್‌ ತೆಗೆದುಕೊಳ್ಳಲು ಆರಂಭಿಸಿದರು.



5ನೇ ತರಗತಿವರೆಗೆ ಮಾತ್ರ ಓದಿದ್ದ ಇವರು, ತಳ್ಳುಗಾಡಿಯೊಂದಿಗೆ ಬದುಕು ಕಟ್ಟಿಕೊಂಡಿದ್ದರು. ನಿತ್ಯ ತಳ್ಳುಗಾಡಿಯಲ್ಲಿ ಸರಕು ಸಾಗಣೆ ಮಾಡಿ 700 ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಸಂಪಾದನೆಯ ಅರ್ಧ ಹಣವನ್ನು ಮಾದಕ ವಸ್ತುವಿಗೆ ಖರ್ಚು ಮಾಡುತ್ತಿದ್ದರು. ಹಲವು ವರ್ಷಗಳ ಕಾಲ ನಿರಂತರವಾಗಿ ಕೊಕೇನ್‌ ತೆಗೆದುಕೊಳ್ಳುತ್ತಿದ್ದರು. 30 ವರ್ಷ ತುಂಬುವುದರೊಳಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದರು. 2 ವರ್ಷ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ವೈದ್ಯರು ಅವರನ್ನು ಸಾಂತ್ವಾನ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಮುಂದುವರೆಸಿದರು.

ಈ ಕೇಂದ್ರದಲ್ಲಿ ಬದುಕುವ ನಿಶ್ಚಯ ಕೈಗೊಂಡ ಫಬೀನಾ, ಜೀವನವನ್ನು ಸಾರ್ಥಕ್ಯಪಡಿಸಿಕೊಳ್ಳಲು ಮುಂದಾದರು. ಆ ವೇಳೆಗಾಗಲೇ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು. ಸಂಪೂರ್ಣ ಗುಣಮುಖಳಾಗಿ ಮನೆಗೆ ಮರಳಿದರು. ತಳ್ಳುಗಾಡಿ ವೃತ್ತಿಯನ್ನು ಮುಂದುವರೆಸಿ, ಮೂವರು ಅನಾಥ ಮಕ್ಕಳನ್ನು ದತ್ತು ಪಡೆದು ಅವರಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಅವಿವಾಹಿತರಾಗಿರುವ 38ರ ಹರೆಯದ ಫಬೀನಾ ದೂರ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ. ಅನಾಥ ಮಕ್ಕಳ ಶಾಲೆ ತೆರೆದು ಆ ಮಕ್ಕಳಿಗೆ ತಂದೆ ತಾಯಿಯರ ಪ್ರೀತಿ ಕೊಡುತ್ತೇನೆ ಎಂದು ಹೇಳುತ್ತಾರೆ.

*
ಅಂಜಲಿ ಸರೋಗಿ
ಕ್ರೀಡಾಪಟುಗಳು ತಮ್ಮ 30–35ನೇ ವಯಸ್ಸಿನ ನಂತರ ನಿವೃತ್ತಿ ಪಡೆಯುವುದು ಸಾಮಾನ್ಯ. ಆದರೆ 40ನೇ ವರ್ಷದಲ್ಲಿ ಕ್ರೀಡಾಲೋಕಕ್ಕೆ ಪದಾರ್ಪಣೆ ಮಾಡಿ ಯಶಸ್ಸು ಕಾಣುತ್ತಿರುವ ಸಾಧಕಿಯ ಕಥೆ ಇದು.

ಮ್ಯಾರಥಾನ್‌ಗೆ ಕಾಲಿಟ್ಟ ಎರಡೇ ವರ್ಷಗಳಲ್ಲಿ ವಿಶ್ವವೇ ಗುರುತಿಸುವಂತಹ ಸಾಧನೆ ಮಾಡಿದ್ದಾರೆ ಅಂಜಲಿ. 89 ಕಿ.ಮೀ  ದೂರದ ಕಾಮ್ರೆಡ್ಸ್‌ ಮ್ಯಾರಥಾನ್‌ನಲ್ಲಿ ಪದಕ ಗೆದ್ದಿರುವುದು ಅವರ ಹೆಗ್ಗಳಿಕೆಯಾಗಿದೆ.

ಅಂಜಲಿ ಸರೋಗಿ ಮುಂಬೈ ನಿವಾಸಿ. ಅವರ ಪತಿ ಹೆಲ್ತ್‌ ಸೆಂಟರ್‌ ನಡೆಸುತ್ತಿದ್ದಾರೆ. ಮಗಳು ಪದವಿ ಓದುತ್ತಿದ್ದಾಳೆ. ಮೂರು ವರ್ಷಗಳ ಹಿಂದೆ ಮಗಳು ಓದುತ್ತಿದ್ದ ಕಾಲೇಜಿನ ಆಡಳಿತ ಮಂಡಳಿ ಆಯೋಜಿಸಿದ್ದ ಮ್ಯಾರಥಾನ್‌ ಓಟದಲ್ಲಿ  ಭಾಗವಹಿಸಿದ್ದರು. ಅದು ವಿದ್ಯಾರ್ಥಿಗಳ ಪೋಷಕರಿಗೆ ಆಯೋಜಿಸಿದ್ದ ಟೂರ್ನಿ ಆಗಿತ್ತು. ಹಾಗಾಗಿ ಕಡ್ಡಾಯವಾಗಿ ಭಾಗವಹಿಸಬೇಕಿತ್ತು. ಅಂದು ಓಡಿದ ಅಂಜಲಿ ಇಂದು ಓಟವನ್ನು ಪ್ರವೃತ್ತಿಯಾಗಿಸಿಕೊಂಡು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಮ್ಯಾರಥಾನ್‌ ಟೂರ್ನಿಗಳಲ್ಲಿ ಗಮನೀಯ ಸಾಧನೆ ಮಾಡುತ್ತಿದ್ದಾರೆ.



ಮಗಳ ಸ್ಫೂರ್ತಿ, ಮನೆಯವರ ಸಹಕಾರದಿಂದ ಅಂಜಲಿ ಓಡುವುದನ್ನು ರೂಢಿಸಿಕೊಂಡರು. ಸಂಸಾರ ನೋಡಿಕೊಳ್ಳುವುದರ ಜತೆಗೆ ಕಠಿಣ ತಾಲೀಮು ನಡೆಸುತ್ತಿದ್ದಾರೆ. ಆರಂಭದಲ್ಲಿ ಸ್ಥಳೀಯ ಟೂರ್ನಿಗಳಲ್ಲಿ ಭಾಗವಹಿಸಿದರು. ಹಾಗೇ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾದ ಡರ್ಬಾನ್‌ನಲ್ಲಿ ನಡೆದ 26 ಕಿ.ಮೀ ಮ್ಯಾರಥಾನ್‌ ಟೂರ್ನಿಯಲ್ಲಿ ಮೊದಲ ಸ್ಥಾನ ಪಡೆದಿದ್ದು ಅವರ ಜೀವನದ ಅವಿಸ್ಮರಣೀಯ ಘಟನೆ. ಮುಂದಿನ ಒಲಿಂಪಿಕ್ಸ್‌ ಟೂರ್ನಿಯಲ್ಲಿ ಭಾಗವಹಿಸಿ ದೇಶಕ್ಕೆ ಪದಕ ತಂದುಕೊಡುವ ಗುರಿ ಅವರದಾಗಿದೆ.

ಸಾಧನೆಗೆ ವಯಸ್ಸು ಯಾವತ್ತು ಅಡ್ಡಿ ಬರುವುದಿಲ್ಲ, ಆತ್ಮವಿಶ್ವಾಸ ಮತ್ತು ಪರಿಶ್ರಮದ ಮೂಲಕ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು. ನಾವು ಕನಸುಗಳ ಜೊತೆ ಜೀವಿಸಬೇಕೇ ಹೊರತು ಭಯದ ಜೊತೆ ಅಲ್ಲ ಎಂದು ಮಹಿಳೆಯರಿಗೆ ಅಂಜಲಿ ಕಿವಿಮಾತು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT